ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡ್ ಗೌನಿಪಲ್ಲಿ ರಸ್ತೆಗೆ ರೂ. 2 ಕೋಟಿ ವೆಚ್ಚದಲ್ಲಿ ಡಾಂಬರು ಹಾಕಲಾಗುವುದು. ರಾಯಲ್ಪಾಡ್ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಾಲ್ಕು ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ರಾಯಲ್ಪಾಡ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾಮಗಾರಿಯ ಗುಣಮಟ್ಟ ಸರಿಯಾಗಿರಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಗುಣಾತ್ಮಕ ಫಲಿತಾಂಶ ತರಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಜಿ.ದೊರೆಸ್ವಾಮಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಂಬಂಧ ಮಧುರವಾಗಿರಬೇಕು. ಅದು ವಿದ್ಯಾರ್ಥಿಗಳ ಕಲಿಕೆ ಮೇಲೆ ಪ್ರಭಾವ ಬೀರುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಎದೆಗುಂದದೆ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಉತ್ತಮ ಫಲಿತಾಂಶ ಪಡೆದು ಉತ್ತಮ ಬದುಕನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಿವೃತ್ತ ಶಿಕ್ಷಕ ಸಿ.ಎಸ್.ಸುಬ್ಬಕೃಷ್ಣಶರ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರಾಂಶುಪಾಲರಾದ ಸುಬ್ರಮಣ್ಯಂ, ಸೈಯದ್ ಯೂಸುಫ್, ಕೆ.ಆರ್.ರಾಮಕೃಷ್ಣ, ವೆಂಕಟಸ್ವಾಮಿರೆಡ್ಡಿ, ನಾರಾಯಣರೆಡ್ಡಿ, ಎ.ಎನ್. ಮಂಜುನಾಥ, ಎಂ.ವಿ.ಬಷೀರ್, ಎ.ಎಸ್.ರಾಮಮೂರ್ತಿ, ಮಹಮ್ಮದ್ ಅಸ್ಲಂ, ವೆಂಕಟರಮಣ, ವಿ.ಆರ್.ಹೊನ್ನಾಕಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸೋಮಶೇಖರ್ ಸ್ವಾಗತಿಸಿದರು. ಅಶ್ವತ್ಥಗೌಡ ವಂದಿಸಿದರು.