ಶನಿವಾರಸಂತೆ: ಸಮೀಪದ ಕಿರಿಬಿಳಾಹ ಗ್ರಾಮದ ರಾಮೇಗೌಡ ಅವರ ಜಮೀನಿನಲ್ಲಿ ಬೀಟೆ ಮರವನ್ನು ಅಕ್ರಮ ವಾಗಿ ಸಾಗಿಸುತ್ತಿದ್ದಾಗ ಮಡಿಕೇರಿ ಅರಣ್ಯ ಸಂಚಾರಿದಳದ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
2 ಲಕ್ಷ ರೂಪಾಯಿ ಬೆಲೆ ಬಾಳುವ ಬೀಟೆ ಮರವನ್ನು ಎರಡು ತುಂಡು ಗಳಾಗಿ ಕತ್ತರಿಸಿ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದಾಗ ಮಾಹಿತಿ ಅರಿತ ಉಪನಿರೀಕ್ಷಕ ಹರಿಶ್ಚಂದ್ರ, ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಅರಣ್ಯ ಇಲಾಖೆಯವರು ದಾಳಿ ನಡೆಸಿ ಬೀಟೆ ಮರವನ್ನು ವಶಪಡಿಸಿ ಕೊಂಡಿದ್ದಾರೆ.
ಆರೋಪಿಗಳಾದ ಕಿರಿಬಿಳಾಹ ಗ್ರಾಮದ ರಾಮೇಗೌಡರ ಮಗ ಚಂದ್ರಪ್ಪ, ಹಾಸನ ಜಿಲ್ಲೆಯ ಹೆತ್ತೂರು ಗ್ರಾಮದ ಸುದೀಪ್ ಹಾಗೂ ಶನಿವಾರಸಂತೆ ಪೊಲೀಸ್ ಪೇದೆ ಕುಮಾರ್ ತಲೆ ಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಜಯಪ್ರಕಾಶ್, ಸಿಬ್ಬಂದಿಗಳಾದ ಗುಣಶೇಖರ್, ಕೆ.ಎಸ್.ಮೇದಪ್ಪ, ತಮ್ಮಯ್ಯ, ಟಿ.ಆರ್.ರಾಜು, ಎಚ್.ರಾಜಪ್ಪ, ಗೋವಿಂದರಾಜ್, ಶರಣರಮೇಶ್, ಕಾಳಿಂಗಪ್ಪ, ಶಿವರಾಂ ಹಾಗೂ ಶರಣಬಸಪ್ಪ ಪಾಲ್ಗೊಂಡಿದ್ದರು.