ಕೋಲಾರ/ಮುಳಬಾಗಲು: ಜಿಲ್ಲೆಯಲ್ಲಿ ಮರಳು ಫಿಲ್ಟರ್, ಸಾಗಣೆ ಹಾವಳಿಯನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರು ಕೋಲಾರ ಮತ್ತು ಮುಳಬಾಗಲಿನಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.
ಶನಿವಾರ ಮುಳಬಾಗಲು ತಾಲ್ಲೂಕು ಬೈರಕೂರು ಹೋಬಳಿಯ 9ಕ್ಕೂ ಹೆಚ್ಚು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮರಳು ಫಿಲ್ಟರ್ ಕೇಂದ್ರಗಳನ್ನು ನಾಶಗೊಳಿಸಿದ್ದಾರೆ. 15ಕ್ಕೂ ಹೆಚ್ಚು ರೈತರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.
ಪ್ರಾಯೋಗಿಕ ಮೋಡ ಬಿತ್ತನೆ ಆರಂಭ
ಮೈಸೂರು: ಕಾವೇರಿ, ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಾಯೋಗಿಕ ಮೋಡ ಬಿತ್ತನೆ ಕಾರ್ಯ ಶನಿವಾರ ಆರಂಭಗೊಂಡಿತು.
ಮೈಸೂರು ವಿಮಾನ ನಿಲ್ದಾಣದಿಂದ ಪೈಪರ್ ಶಯನ್ ವಿಮಾನ ಮೋಡ ಬಿತ್ತನೆಯನ್ನು ಆರಂಭಿಸಿದೆ. ಮೈಸೂರಿನಿಂದ ಬೆಂಗಳೂರು ತನಕ ಹಾಗೂ ಮೇಕೆದಾಟು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಮೋಡ ಬಿತ್ತನೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ಮೋಡಗಳ ರಚನೆಯನ್ನು ಆಧರಿಸಿ ಬಿತ್ತನೆ ನಡೆಯಲಿದೆ.
`ಬಿಎಸ್ವೈಗೆ ಧೈರ್ಯ ಇಲ್ಲ~
ರಾಯಚೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹೊಸ ಪಕ್ಷ ಕಟ್ಟುವ ಶಕ್ತಿ ಇಲ್ಲ. ಪಕ್ಷ ಬಿಡಬೇಕು ಎಂದು ಅನಿಸಿದ ತಕ್ಷಣ ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಪಕ್ಷ ಬಿಟ್ಟು ಮರುಕ್ಷಣ ಹೊಸ ಪಕ್ಷ ಕಟ್ಟಿದ್ದರು. ಅಂಥ ಧೈರ್ಯ ಯಡಿಯೂರಪ್ಪ ಅವರಿಗೆ ಇಲ್ಲ~ ಎಂದು ಶನಿವಾರ ಸುದ್ದಿಗಾರರೊಂದಿಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಿಡುವ ಬಗ್ಗೆ ಯಡಿಯೂರಪ್ಪ ಅವರು ಒಂದು ವರ್ಷದಿಂದ ಹೇಳಿಕೊಂಡೇ ಬಂದ್ದಾರೆ. ಪಕ್ಷವನ್ನೂ ಬಿಟ್ಟಿಲ್ಲ. ಹೊಸ ಪಕ್ಷವನ್ನೂ ಕಟ್ಟಿಲ್ಲ. ಬರೀ ಬೆದರಿಕೆ ಮತ್ತು ಕಾಲಹರಣ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮೂದಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.