ವಿಜಾಪುರ: `ಅಪ್ಪು ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ- ಸಚಿವರಾಗಲು ಬಿ.ಎಸ್. ಯಡಿಯೂರಪ್ಪ ಅವರೇ ಕಾರಣ. ಯಡಿಯೂರಪ್ಪ ವಿರುದ್ಧ ಯತ್ನಾಳ ಬಿದ್ದರೆ, ಅಪ್ಪು ಕೈಕೊಟ್ಟರು. ಮತದಾರರು ಇವರಿಗೆ ತಕ್ಕ ಪಾಠ ಕಲಿಸಬೇಕು' ಎಂದು ಕರ್ನಾಟಕ ಜನತಾ ಪಕ್ಷದ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು.
ವಿಜಾಪುರ ನಗರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕರಿಬಸವರಾಜ ನಾಗೂರ (ಬಾಬು) ಅವರ ಪರವಾಗಿ ಗುರುವಾರ ಸಂಜೆ ಇಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.
`ಯಡಿಯೂರಪ್ಪ ನುಡಿದಂತೆ ನಡೆಯುವ ನಾಯಕ. ತಜ್ಞರ ಸಲಹೆ ಪಡೆದು ನಮ್ಮ ಪಕ್ಷದ ಪ್ರಣಾಳಿಕೆ ಹೊರತಂದಿದ್ದು, ಆ ಎಲ್ಲ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ' ಎಂದರು.
ಕೆಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ 20 ಸಾವಿರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು, 65 ವರ್ಷ ತುಂಬಿದ ರೈತರಿಗೆ ಪಿಂಚಣಿ ನೀಡುವುದೂ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳು ನಮ್ಮ ಪ್ರಣಾಳಿಕೆಯಲ್ಲಿವೆ ಎಂದು ಹೇಳಿದರು.
ಪಕ್ಷದ ಮುಖಂಡ ಎಂ.ಡಿ. ಲಕ್ಷ್ಮಿನಾರಾಯಣ, ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀನಾಥ ಮಸಬಿನಾಳ ಮಾತನಾಡಿ, `ಸುಶಿಕ್ಷಿತರಾಗಿರುವ ಡಾ.ನಾಗೂರ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು' ಎಂದು ಮನವಿ ಮಾಡಿದರು.
ಅಭ್ಯರ್ಥಿ ಕರಿಬಸವರಾಜ ನಾಗೂರ, ವಿಜಾಪುರ ನಗರದ ಸಮಗ್ರ ಅಭಿವೃದ್ಧಿಗಾಗಿ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.ಬಬಲೇಶ್ವರ ಕ್ಷೇತ್ರದ ಅಭ್ಯರ್ಥಿ ಬಸಪ್ಪ ಹೊನವಾಡ, ಪಕ್ಷದ ಪದಾಧಿಕಾರಿಗಳಾದ ಎಸ್.ಎಂ. ಮಡಿವಾಳರ, ಮಂಚಾಲೇಶ್ವರಿ, ವಿದ್ಯಾರಾಣಿ ತುಂಗಳ ಇತರರು ವೇದಿಕೆಯಲ್ಲಿದ್ದರು.