ನವದೆಹಲಿ, (ಐಎಎನ್ಎಸ್): ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವುದು ಮತ್ತು ರೈಲು ಸಂಪರ್ಕ ಜಾಲ ಬಲಪಡಿಸುವ ಆಶಯದೊಂದಿಗೆ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಲೋಕಸಭೆಯಲ್ಲಿ 2011-12ರ ರೈಲ್ವೆ ಬಜೆಟ್ ಮಂಡಿಸಿದರು.
ಪ್ರಸಕ್ತ ಬಜೆಟ್ ನಲ್ಲಿ 10,000 ಕೋಟಿ ರೂಗಳನ್ನು ರೈಲ್ವೆ ಬಾಂಡ್ ಗಳ ಮೂಲಕ ಸಂಗ್ರಹಿಸಲು ಹಾಗೂ ವಿವಿಧ ಯೋಜನೆಗಳಿಗಾಗಿ 57,630 ಕೋಟಿ ರೂ ಬಂಡವಾಳ ಹೂಡಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ರೈಲು ಆಧಾರಿತ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡಿದ್ದಾರೆ.
ಬಜೆಟ್ ನ ಮುಖ್ಯಾಂಶಗಳು :
ದೇಶದ ಉದ್ದಗಲ ಪ್ರವಾಸ ಕೈಗೊಳ್ಳುವವರಿಗಾಗಿ ಈ ವರ್ಷ ~ಗೋ ಇಂಡಿಯಾ~ ಸ್ಮಾರ್ಟ್ ಕಾರ್ಡ್ ಗಳ ಸೇವೆಯನ್ನು ಜಾರಿಗೆ ತರಲಾಗುವುದು.
ಹಿರಿಯ ನಾಗರಿಕರ ರೈಲ್ವೆ ದರದ ರಿಯಾಯತಿ ಪಡೆಯುವ ಪ್ರಯಾಣಿಕರ ವಯಸ್ಸನ್ನು 58 ವರ್ಷಗಳಿಂದ 60 ವರ್ಷಕ್ಕೆ ಏರಿಸಲಾಗಿದೆ. ಇನ್ನು ಮುಂದೆ ಅಂಗವಿಕಲರು ರಾಜಧಾನಿ, ಶತಾಬ್ಧಿ ರೈಲುಗಳಲ್ಲಿ ರಿಯಾಯತಿ ದರದಲ್ಲಿ ಪ್ರಯಾಣಿಸಬಹುದು.
ಇದೇ ಮಾರ್ಚ್ ಅಂತ್ಯದೊಳಗೆ ಸೇನೆಯಿಂದ ನಿವೃತ್ತರಾದ 16,000 ಕ್ಕೂ ಅಧಿಕ ಮಂದಿಗೆ ರೈಲ್ವೆಯಲ್ಲಿ ನೌಕರಿ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.