ನವದೆಹಲಿ (ಪಿಟಿಐ): ಆಹಾರ ಹಣದುಬ್ಬರ ದರ ಗಣನೀಯ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ತಗ್ಗಿಸಲು ಇದು ಸಕಾಲವಾಗಿದೆ. ಇದರಿಂದ 2012ರಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಗಮನಾರ್ಹ ಉತ್ತೇಜನ ಲಭಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
2012ನೇ ವರ್ಷ ಎಲ್ಲರಿಗೂ ಸಮೃದ್ಧಿ ತರಲಿದೆ. ದೇಶದ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಈ ವರ್ಷ ಮಹತ್ವದ ಕೊಡುಗೆ ನೀಡಲಿದೆ ಎಂದು ಅವರು ಪಾಕ್ಷಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಣದುಬ್ಬರ ದರ ಹಿತಕರ ಮಟ್ಟಕ್ಕೆ ಇಳಿದರೆ ಹೂಡಿಕೆ ಮತ್ತು ಗ್ರಾಹಕರ ಬೇಡಿಕೆ ಚೇತರಿಸಿಕೊಳ್ಳಲಿದೆ. ಮುಖ್ಯವಾಗಿ ಅಗತ್ಯ ವಸ್ತುಗಳ ದರಗಳು ಸ್ಥಿರಗೊಳ್ಳಲಿವೆ ಎಂದಿದ್ದಾರೆ.