ಮಡಿಕೇರಿ: ತಾಲ್ಲೂಕಿನ ಮುಕ್ಕೊಡ್ಲು, ಅವಂಡಿ ಹಾಗೂ ದೇಸ್ತೂರು ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್ ಸೌಲಭ್ಯ ನೀಡದೆ ವಂಚಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸೆ.20ರಂದು ಲೋಕಾಯುಕ್ತರ ತಂಡವು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿದೆ ಎಂದು ಕೊಡಗು ಪಶ್ಚಿಮ ಘಟ್ಟ ಮೂಲ ನಿವಾಸಿಗಳ ವಿಮೋಚನಾ ಸಮಿತಿಯ ಸಂಚಾಲಕ ಕಾಳಚಂಡ ರವಿ ತಮ್ಮಯ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ವಿದ್ಯುತ್ ಸೌಲಭ್ಯವನ್ನು ನೀಡದೆ ಜನರಿಗೆ ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ 2004ರ ಅಕ್ಟೋಬರ್ ತಿಂಗಳಿನಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದರು.
ಲೋಕಾಯುಕ್ತ ತನಿಖಾಧಿಕಾರಿ ಬಿ. ಪ್ರಸನ್ನ ಕುಮಾರ್ ಅವರ ನೇತೃತ್ವದ ತಂಡವು ಇಂದು (ಬುಧವಾರ) ಮಕ್ಕಂದೂರು ವ್ಯಾಪ್ತಿ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳ ಅಕ್ರಮಗಳ ಕುರಿತು ತನಿಖೆ ಆರಂಭಿಸಿದೆ ಎಂದರು.
ಪಶ್ಚಿಮ ಘಟ್ಟ ಭಾಗದ ಜನರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಲು ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅವರು ದೂರಿದರು. ಪ್ರಮುಖರಾದ ಕಾಳಚಂಡ ಪಳಂಗಪ್ಪ, ಪೊನ್ನಪ್ಪ, ಚಿಣ್ಣಪ್ಪ, ಸುಜನ್ ಹಾಜರಿದ್ದರು.