ಹಿರೀಸಾವೆ: ಹಿರೀಸಾವೆ-ಶ್ರವಣಬೆಳಗೊಳ ಕುಡಿಯುವ ನೀರಾವರಿ ಯೋಜನೆಗೆ ಜುಲೈ 20 ರೊಳಗೆ ತಾಲ್ಲೂಕು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸರ್ಕಾರಕ್ಕೆ ತಾಂತ್ರಿಕ ಮಾಹಿತಿ ನೀಡದಿದ್ದರೆ 23 ರಂದು ಹಿರೀಸಾವೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಎಚ್.ವಿ.ಕೃಷ್ಣೇಗೌಡ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಕುಡಿಯುವ ನೀರಾವರಿ ಯೋಜನೆಯ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಯ ಮಂಜೂರಾತಿಗೆ ಒಪ್ಪಿಗೆ ನೀಡಲು, ರಾಜ್ಯ ಕಾವೇರಿ ನೀರಾವರಿ ನಿಗಮವು 29 ತಾಂತ್ರಿಕ ತೊಡಕುಗಳ ಬಗ್ಗೆ ಮಾಹಿತಿ ಕಳಿಸುವಂತೆ ತ್ಲ್ಲಾಲೂಕು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಪತ್ರ ಬರೆದಿದೆ, ಹಿಂದೆ ನಿಗಮದ ತಾಲ್ಲೂಕು ಅಧಿಕಾರಿಗಳು ಯೋಜನೆಯ ಬಗ್ಗೆ ಮಾಹಿತಿ ನೀಡುವಾಗ ತಪ್ಪು ಎಸಗಿದ್ದಾರೆ, ಈ ಭಾರಿ ಮತ್ತೆ ತಪ್ಪು ಮಾಹಿತಿ ನೀಡಿದರೆ, ಎರಡು ಹೋಬಳಿಯ ಜನರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೇಳಿದರು.
ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ಹಲವು ವರ್ಷಗಳಿಂದ ಯೋಜನೆಗೆ ಹೋರಾಟ ಮಾಡುತ್ತಿದ್ದರೂ ಯಾವುದೇ ಸರ್ಕಾರವು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಶ್ರೀಧರ್ ಮಾತನಾಡಿ, ಕುಡಿಯು ನೀರಿನ ತೊಂದರೆಯನ್ನು ಅನುಭವಿಸುತ್ತಿದ್ದರು, ಸರ್ಕಾರ ಗಮನಹರಿಸಿಲ್ಲ ಎಂದು ಆರೋಪಿಸಿದರು. ತಾಲ್ಲೂಕು ಸಾಹಿತ್ಯ ಪರಿಷತ್ನ ಉಪಾದ್ಯಕ್ಷ ಬೋಮ್ಮೇಗೌಡ, ಅಂತನಹಳ್ಳಿಯ ಅಣ್ಣಪ್ಪ, ರೈತ ಸಂಘದ ಎಚ್.ಕೆ.ರಘು, ಕರವೇನ, ಮಹೇಶ್, ವಾಸು, ಡಾ.ಪರಮೇಶ್ವರ ಸಂಘದ ಮಂಜುನಾಥ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಶಶಿಧರ್, ವಕೀಲ ಉಮೇಶ್ ಇತರರು ಮಾತನಾಡಿದರು.
ಹೋಬಳಿಯ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಎರಡು ಹೋಬಳಿಗಳ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ, ಕುಡಿಯು ನೀರು ಯೋಜನೆಯ ಮಂಜುರಾತಿಯಾಗಲು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.