ರಾಯಚೂರು: ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ವರ್ಷಾಚರಣೆ ಹಾಗೂ ನಾಡಹಬ್ಬ ವಿಜಯ ದಶಮಿ ಅಂಗವಾಗಿ ಇದೇ 21ರಂದು `ಜಾಗೋ ಭಾರತ್~ ಕಾರ್ಯಕ್ರಮವನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಂಪೂರ್ಣ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಸದ್ಭಾವನಾ ಸಮಿತಿ ಅಧ್ಯಕ್ಷ ಎಂ ರಾಜೇಂದ್ರಕುಮಾರ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 21ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸಮಿತಿಯು ನೂತನವಾಗಿ ರಚನೆಗೊಂಡಿದ್ದು, ಈ ಕಾರ್ಯಕ್ರಮ ಚೊಚ್ಚಲ ಕಾರ್ಯಕ್ರಮವಾಗಿದೆ. ಹಲವು ದಿನಗಳಿಂದ ಸಮಾನ ಮನಸ್ಕ ಯುವ ಸಮುದಾಯ ಚಿಂತನೆ ಮಾಡಿದ ಬಳಿಕ ರೂಪಗೊಂಡ ಸಮಿತಿ ಇದಾಗಿದೆ ಎಂದು ಹೇಳಿದರು.
ಚಕ್ರವರ್ತಿ ಸೂಲಿಬೆಲೆ ಮತ್ತು ಬಳಗದವರು ಆಗಮಿಸಿ `ಜಾಗೋ ಭಾರತ್~ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ದೇಶದ ಸಂಸ್ಕೃತಿ, ಸಂಸ್ಕಾರ, ವೀರಯೋಧರ ಯಶೋಗಾಥೆಯನ್ನು ದೇಶವಾಸಿಗಳಲ್ಲಿ ಮನ ಮುಟ್ಟುವಂತೆ ಮಾಡಿ ದೇಶಭಕ್ತಿ ಜಾಗೃತಗೊಳಿಸುವ ಪ್ರಯತ್ನ ಮಾಡಲಿದ್ದಾರೆಂದರು.
ಮೇರಾ ಭಾರತ್ ಮಹಾನ್, ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್, ನೆಹರು ಪರದೆ ಸರಿಯಿತು, ಪೆಪ್ಸಿ ಕೋ ಕೋ ಅಂತರಾಳ, ಸ್ವಾತಂತ್ರ್ಯ ಮಹಾ ಸಂಗ್ರಾಮ 1857- ಒಂದು ವಾಕ್ಚಿತ್ರ, ಭಾರತ ಭಕ್ತ ವಿದ್ಯಾನಂದ ಅಲ್ಲದೇ ಇನ್ನೂ ಅನೇಕ ಕೃತಿಗಳನ್ನು ಚಕ್ರವರ್ತಿ ಸೂಲಿಬೆಲೆ ರಚಿಸಿ ಪ್ರಖ್ಯಾತ ಲೇಖಕರಾಗಿದ್ದಾರೆ.
ಈಗ ಜಾಗೋ ಭಾರತ್ ತಂಡವನನು ಮುನ್ನಡೆಸುತ್ತಿದ್ದು, ಸಂಸ್ಕಾರ ಭಾರತೀಯ ಪ್ರಾಂತ ಉಪಾಧ್ಯಕ್ಷರಾಗಿ ಹಾಗೂ ಇನ್ನೂ ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಾರತ ಮಾತೆ ಸೇವೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ ವಹಿಸಲಿದ್ದಾರೆ ಎಂದು ಹೇಳಿದರು. ಉಪಾಧ್ಯಕ್ಷ ಮಹಾಂತೇಶ ಮುಕ್ತಿ, ಕಾರ್ಯದರ್ಶಿ ಅಮರೇಗೌಡ ಪೊಲೀಸ್ಪಾಟೀಲ, ಎಂ ಮಲ್ಲಿಕಾರ್ಜುನ ಹೊಕ್ರಾಣಿ, ನಾಗರಾಜ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.