ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಕೆರೆಗಳ ಒಡಲು ತುಂಬುವುದ್ಯಾವಾಗ?

Last Updated 1 ಜೂನ್ 2013, 6:05 IST
ಅಕ್ಷರ ಗಾತ್ರ

ದಾವಣಗೆರೆ ಮತ್ತು ಜಗಳೂರು ತಾಲ್ಲೂಕಿನ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಮಹತ್ವದ ಉದ್ದೇಶ ಹೊಂದಿರುವ ಯೋಜನೆಯಿದು. `ರಾಜನಹಳ್ಳಿ ಏತ ನೀರಾವರಿ ಯೋಜನೆ' ಎಂದು ಹೆಸರಿದ್ದರೂ ಸಹ `22 ಕೆರೆಗಳ ಏತ ನೀರಾವರಿ ಯೋಜನೆ' ಎಂದೇ ಹೆಚ್ಚು ಜನಪ್ರಿಯ.ಕರ್ನಾಟಕ ನೀರಾವರಿ ನಿಗಮದ ನಂ.5 ಭದ್ರಾ ನಾಲಾ ವಿಭಾಗದ ವತಿಯಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಎಲ್ಲವೂ ಅಂದುಕೊಂಡತೆಯೇ ನಡೆದಿದ್ದಲ್ಲಿ, ಈ ವೇಳೆಗಾಗಲೇ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು.

`ಯೋಜನೆಯ ಕಾಮಗಾರಿ ಈಗಾಗಲೇ ಮುಗಿಯಬೇಕಿತ್ತು. ಇನ್ನೂ ಶೇ 10ರಷ್ಟು ಬಾಕಿಯಿದೆ. ಇದರಿಂದ ಯೋಜನೆಯ ಲಾಭ ರೈತರಿಗೆ ದೊರೆಯದಂತಾಗಿದೆ. ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ' ಎಂಬುದು ರೈತರ ಅಭಿಪ್ರಾಯ.

ಅಧಿಕಾರಿಗಳು ಈ ಹಿಂದೆ ನೀಡಿದ್ದ ಭರವಸೆ ಈಡೇರಿಲ್ಲ. ಅಡಿಕೆ ತೋಟಗಳು ನೀರಿಲ್ಲದೇ ಒಣಗುತ್ತಿವೆ. ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಿಯಾದರೂ ಯೋಜನೆಯಿಂದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಅವರ ಒತ್ತಾಯ.

ಈಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ `ಎಲ್ ಆ್ಯಂಡ್ ಟಿ' ಕಂಪೆನಿಯ ಪ್ರತಿನಿಧಿ, ಯೋಜನೆಯಡಿ ಸಿವಿಲ್ ಕಾಮಗಾರಿಗಳು ಮುಗಿದಿವೆ. ಶೇ 10ರಷ್ಟು ಕಾಮಗಾರಿ ಮಾತ್ರ ಬಾಕಿ ಇದೆ. ವಿದ್ಯುತ್ ಮಾರ್ಗದ ಹಾಗೂ ಸಂಪರ್ಕ ಕಲ್ಪಿಸುವ ಕೆಲಸವಷ್ಟೇ ಬಾಕಿಯಿದೆ.

ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು. ಯೋಜನೆಯಡಿ, ಹೆಚ್ಚುವರಿಯಾಗಿ 4 ಕೆರೆಗಳನ್ನು ಸೇರ್ಪಡೆಗೊಳಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಆಗ, ಚುನಾವಣೆ ಮುಗಿದ ನಂತರ ಪ್ರತಿಭಟನೆ ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ರೈತರ ಎಚ್ಚರಿಕೆ ನಂತರವೂ ಕಾಮಗಾರಿ ತೀವ್ರಗತಿಯಲ್ಲಿ ನಡೆದಿಲ್ಲ. ಇದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಆಗಾಗ `ನೆಪ'ವೊಡ್ಡಿ ಕಾಮಗಾರಿ  ಸ್ಥಗಿತಗೊಳಿಸಿದ ಉದಾಹರಣೆಗಳಿವೆ. ರೈತರು ಪ್ರತಿಭಟನೆ ಮಾತು ಆಡುತ್ತಿದ್ದಂತೆಯೇ, ಕಾಮಗಾರಿ ಚುರುಕು ಪಡೆದುಕೊಳ್ಳುವುದು ಕಂಡುಬರುತ್ತಿದೆ. ಕಾಮಗಾರಿ ಆರಂಭವಾದಾಗಿನಿಂದಲೂ ಹೀಗೆ ನಡೆದಿರುವುದನ್ನು ಕಾಣಬಹುದು. ಇದೀಗ, ಹೊಸ ಸರ್ಕಾರ ರಚನೆಯಾಗಿದೆ. ನೂತನ ಶಾಸಕರು ಭರವಸೆ ನೀಡಿದಂತೆ ನಡೆದುಕೊಳ್ಳುವರೇ ಎಂಬುದು ಈ ಭಾಗದ ರೈತರ ನಿರೀಕ್ಷೆಯಾಗಿದೆ.

ಯೋಜನೆಯ ಪ್ರಗತಿ ವಿವರ
ಜಾಕ್‌ವೆಲ್- 1: ಹರಿಹರ ತಾಲ್ಲೂಕು ಹಲಸಬಾಳು ಗ್ರಾಮದ ರಿ.ಸರ್ವೇ ನ.1/1 ಪಿ1 ಹಾಗೂ ಇತರ ಒಟ್ಟು 10-20 ಎಕೆರೆ ಜಮೀನು. ಈ ಜಾಕ್‌ವೆಲ್ ಕಾಮಗಾರಿ ಪೂರ್ಣಗೊಂಡಿದೆ.

ಜಾಕ್‌ವೆಲ್- 2: ದಾವಣಗೆರೆ ತಾಲ್ಲೂಕು ಮಲ್ಲಶೆಟ್ಟಿ ಹಳ್ಳಿ ಗ್ರಾಮದ ರಿ.ಸರ್ವೇ ನಂ.16ರಲ್ಲಿ 4.00 ಎಕರೆ ಜಮೀನು. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅನುಮೋದನೆ (ಕನ್ಸಂಟ್ ಅವಾರ್ಡ್) ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಾಕ್‌ವೆಲ್ ಕಾಮಗಾರಿ ಪ್ರಗತಿಯಲ್ಲಿದೆ.

ಪೈಪ್‌ಲೈನ್: ಎಂ.ಎಸ್.ರೈಸಿಂಗ್ ಮುಖ್ಯ ಪೈಪ್‌ಲೈನ್ ಕಾಮಗಾರಿ ಒಟ್ಟು 47.665 ಮೀಟರ್. ಈಗಾಗಲೇ ಅಳವಡಿಸಲಾದ ಪೈಪ್‌ಲೈನ್ 46.39 ಕಿ.ಮೀ. ಬಾಕಿ ಅಳವಡಿಸಬೇಕಾದ ಪೈಪ್‌ಲೈನ್ ಕಾಮಗಾರಿ- 1.275 ಕಿ.ಮೀ. ಪಿಎಸ್‌ಸಿ/ಎಚ್‌ಡಿಪಿಇ ಪೈಪ್ ಒಟ್ಟು 58.50 ಕಿ.ಮೀಟರ್‌ನಲ್ಲಿ 58.250 ಕಿ.ಮೀ.ನಷ್ಟು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.

ಬಾಕಿ ಉಳಿದ ಎಂ.ಎಸ್. ಪೈಪ್‌ಲೈನ್ ಕಾಮಗಾರಿ ವಿವರ: ಡಿ.ಬಿ.ಕೆರೆ ನಾಲೆಯ ಬಳಿ 45 ಮೀಟರ್ (ಗ್ಯಾಪ್ ಕ್ಲೋಸಿಂಗ್ ಕಾಮಗಾರಿ ಬಾಕಿ ಇದೆ). ಶಾಮನೂರು ಗ್ರಾಮದ ವ್ಯಾಪ್ತಿಯಲ್ಲಿ 1,090 ಮೀಟರ್ (ಕಾಮಗಾರಿ ಪ್ರಗತಿಯಲ್ಲಿದೆ). ರೈಲ್ವೆ ಕ್ರಾಸಿಂಗ್ ಬಳಿ 80 ಕಿ.ಮೀ. (ಎಲ್ ಆ್ಯಂಡ್ ಟಿ ಕಂಪೆನಿಯವರಿಗೆ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ). ಎಚ್.ಕಲ್ಪನಹಳ್ಳಿ ಬಳಿ 60 ಮೀಟರ್ (ಕಾಮಗಾರಿ ಪ್ರಗತಿಯಲ್ಲಿದೆ). ಒಟ್ಟು  1,275 ಮೀ. (1.275 ಕಿ.ಮೀ.) ಬಾಕಿ ಇದೆ. ಐದು ಭಾಗದದಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ರಾಸಿಂಗ್ ಮಾಡಬೇಕಿದ್ದು, ಈಗಾಗಲೇ ನರಗನಹಳ್ಳಿ, ಕೊಗ್ಗನೂರು ಬಳಿ ಪೂರ್ಣಗೊಂಡಿದೆ. ಹೊನ್ನೂರು ಬಳಿ ಕಾಮಗಾರಿ ಪ್ರಗತಿಯಲ್ಲಿದೆ.

ಆಗಬೇಕಾದ ಕೆಲಸವೇನು?: ಜಾಕ್‌ವೆಲ್-1ರ ಕಾಮಗಾರಿಗೆ ಅವಶ್ಯವಿರುವ 2,850 ಕಿ.ವಿ.ಎ. ವಿದ್ಯುತ್ ಕಾಮಗಾರಿ ಮತ್ತು ಬ್ರೇಕರ್‌ನ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ. ಜಾಕ್‌ವೆಲ್-ರ ವಿದ್ಯುತ್ ಸಂಪರ್ಕ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಇದೇ ಮೇ 24ರಂದು ಬಿ.ಆರ್. ಪ್ರಾಜೆಕ್ಟ್ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್, ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಎಂಜಿನಿಯರ್ ಗುತ್ತಿಗೆದಾರರೊಂದಿಗೆ ಕಾಮಗಾರಿಯ ಅಡೆತಡೆಗಳನ್ನು ನಿವಾರಿಸುವ ಸಂಬಂಧ ಚರ್ಚಿಸಿ ಗುತ್ತಿಗೆದಾರರ ಮನವೊಲಿಸಿದ್ದಾರೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇದರಂತೆ, ಗುತ್ತಿಗೆದಾರರು ಕ್ರಮ ಕೈಗೊಂಡಿದ್ದಾರೆ.

ರಾಜನಹಳ್ಳಿ ಏತ ನೀರಾವರಿ ಯೋಜನೆಯ ಒಟ್ಟು ರೂ 94.30 ಕೋಟಿ ಅನುದಾನದಲ್ಲಿ ಈವರೆಗೆ ರೂ 79.99 ಕೋಟಿಯ ಕಾಮಗಾರಿ ಪ್ರಗತಿ ಸಾಧಿಸಲಾಗಿದೆ. ಕಾಮಗಾರಿ ತ್ವರಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ನಂ.5 ಭದ್ರಾ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ನಿಗದಿಪಡಿಸಿದ ಅವಧಿ ಮುಗಿದರೂ ಪೂರ್ಣಗೊಳ್ಳದಿರುವ ರಾಜನಹಳ್ಳಿ ಏತ ನೀರಾವರಿ ಯೋಜನೆ (22 ಕೆರೆಗಳ ಏತ ನೀರಾವರಿ ಯೋಜನೆ) ಕಾಮಗಾರಿಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ. ಈ ಸಂಬಂಧ ಗಡುವು ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ನೂತನ ಶಾಸಕ ಕೆ.ಶಿವಮೂರ್ತಿ ಅವರೂ ಸಹ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಈ ಯೋಜನೆ ಏನು? ಎತ್ತ? ಇದರಿಂದ ಆಗುವ ಪ್ರಯೋಜನವೇನು? ಯೋಜನೆಯು ಯಾವ ಹಂತದಲ್ಲಿದೆ ಎಂಬಿತ್ಯಾದಿ ಮಾಹಿತಿ ಒದಗಿಸಲು `ಪ್ರಜಾವಾಣಿ' ಪ್ರಯತ್ನಿಸಿದೆ.

ಯೋಜನೆಯ ಪ್ರಮುಖ ಅಂಶಗಳೇನು?
ಯೋಜನೆಗೆ ಮಂಜೂರಾದ ಅಂದಾಜು ಮೊತ್ತರೂ 11,269.16 ಲಕ್ಷ.

2007ರ ಜ.5ರಂದು ಆಡಳಿತಾತ್ಮಕ ಮಂಜೂರಾತಿ ದೊರೆಯಿತಾದರೂ ತಾಂತ್ರಿಕ ಮಂಜೂರಾತಿ ಸಿಗಲು ಎಂಟು ತಿಂಗಳು ಬೇಕಾಯಿತು (2007ರ ಆ.14).

`ಟರ್ನ್ ಕೀ' ಟೆಂಡರ್‌ಗೆಂದು ರೂ  10,500 ಲಕ್ಷ ಇಡಲಾಗಿತ್ತು.

ಕರಾರಿನ ಮೊತ್ತ ರೂ  94,30,00,000.

ಟೆಂಡರ್‌ನ ಪ್ರೀಮಿಯಂ ಶೇ 10.23. 2008ರ ಆ.21ರಂದು ಈ ಸಂಬಂಧ ಒಪ್ಪಂದವಾಗಿದೆ.

ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ಅವಧಿ 2 ವರ್ಷಗಳು.

ಒಟ್ಟು ಕೆರೆಗಳು 22.

ನೀರಿನ ಮೂಲ- ಹರಿಹರ ತಾಲ್ಲೂಕಿನಲ್ಲಿ ಹಲಸಬಾಳು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಪೂರೈಸುವುದು.

ಕೆರೆಗಳ ಒಟ್ಟು ಸಾಮರ್ಥ್ಯ 1.00 ಟಿಎಂಸಿ ಅಥವಾ 28.33 ಮೀ.ಕ್ಯೂ.ಮೀಟರ್.

ಹರಿಹರ ತಾಲ್ಲೂಕು ಹಲಸಬಾಳು ಗ್ರಾಮದಲ್ಲಿರುವ ಜಾಕ್‌ವೆಲ್-1ರಲ್ಲಿ ನೀರು ಹರಿವಿನ ಪ್ರಮಾಣ 1.343 ಕ್ಯೂ.ಮೀ. ಪ್ರತಿ ಸೆಕೆಂಡ್‌ಗೆ (ಆರು ತಿಂಗಳ ಅವಧಿಗೆ). 521.856 ಮೀಟರ್ ನದಿಯ ತಳಮಟ್ಟವಿದ್ದು, 519.10 ಮೀಟರ್‌ನಷ್ಟು ಜಾಕ್‌ವೆಲ್ ತಳಮಟ್ಟವಿದೆ. ಇಲ್ಲಿ 532.75 ಮೀಟರ್‌ನಷ್ಟು ಗರಿಷ್ಠ ನೀರಿನ ಮಟ್ಟ ಗುರುತಿಸಲಾಗಿದ್ದು, 536.25 ಮೀಟರ್ ಪಂಪ್‌ಹೌಸ್ ಮಟ್ಟ ನಿಗದಿಪಡಿಸಲಾಗಿದೆ. ಪಂಪ್‌ಗಳ ಸಂಖ್ಯೆ 3 (2 ಪ್ಲಸ್ 1) ಆಗಿದ್ದು, 1,850 ಅಶ್ವಶಕ್ತಿ (ಎಚ್.ಪಿ.) ಸಾಮರ್ಥ್ಯದವು.

ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ 2ನೇ ಜಾಕ್‌ವೆಲ್ ನಿರ್ಮಾಣಗೊಳ್ಳಲಿದೆ (ಸ್ಥಳ: ರೈಸಿಂಗ್ ಮೇನ್‌ನ 28.4 ಕಿ.ಮೀ.ನಲ್ಲಿ). ಪಂಪ್‌ಗಳ ಸಂಖ್ಯೆ- 750 ಅಶ್ವಶಕ್ತಿ ಸಾಮರ್ಥ್ಯದ ಮೂರನ್ನು ನಿಗದಿಪಡಿಸಲಾಗಿದೆ.

ಪಂಪ್‌ಗಳ ವಿವರ: ಎಂ.ಎಸ್. ರೈಸಿಂಗ್ ಮೇನ್- 47.665. ಎಚ್‌ಡಿಪಿಐ ಪೈಪ್- 34.63 ಕಿ.ಮೀ. ಪಿಎಸ್‌ಸಿ ಪೈಪ್- 23.195 ಮೀ.

ಮೊದಲ ಕಾಲಾವಧಿ ವಿಸ್ತರಣೆ: 20.08.2010ರಿಂದ 31.03.2012.

ಎರಡನೇ ಕಾಲಾವಧಿ ವಿಸ್ತರಣೆ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮೋದನೆ ನಿರೀಕ್ಷಿಸಲಾಗಿದೆ.

ಯಾವ್ಯಾವ ಕೆರೆಗಳು?
ದಾವಣಗೆರೆ:
ಹೊನ್ನೂರು, ಕೊಗ್ಗನೂರು, ಸಿದ್ದನೂರು, ಆನಗೋಡು, ಹಾಲವರ್ತಿ, ಹೆಬ್ಬಾಳ, ಕಂದನಕೋವಿ, ಅಣಜಿ, ತುಂಬಿಗೆರೆ, ಐಗೂರು, ಅಗಸನಕಟ್ಟೆ, ಬೋರಗೊಂಡನಹಳ್ಳಿ, ಆಲೂರು, ನರಗನಹಳ್ಳಿ, ಕೊಡಗನೂರು, ಸುಲ್ತಾನಿಪುರ, ನೇರ್ಲಗಿ, ದೊಡ್ಡರಂಗವ್ವನಹಳ್ಳಿ ಹಾಗೂ ಕಬ್ಬೂರು ಕೆರೆಗಳು. ಜಗಳೂರು ತಾಲ್ಲೂಕು: ತುಪ್ಪದಹಳ್ಳಿ, ಬಿಳಿಚೋಡು ಹಾಗೂ ಹಾಲೇಕಲ್ಲು.

ಸೆಪ್ಟೆಂಬರ್‌ಗೆ ಮುಕ್ತಾಯ?
ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಿವಿಲ್ ಕಾಮಗಾರಿ ಮುಗಿದಿದೆ. ಎಲೆಕ್ಟ್ರಿಕಲ್ ವರ್ಕ್ ಬಾಕಿ ಇದೆ. 6 ತಿಂಗಳಿಂದ ಓಡಾಡಿದ್ದಕ್ಕೆ ಈಗ ಎಲೆಕ್ಟ್ರಿಕಲ್ ಕಾಮಗಾರಿ ಆರಂಭವಾಗಿದೆ. ಆಗಸ್ಟ್‌ನಲ್ಲಿ ಮುಗಿಸಬೇಕು ಎಂದು ಗಡುವು ನೀಡಲಾಗಿದೆ. ಆದರೆ, ತಾಂತ್ರಿಕ ತೊಂದರೆಗಳು ಉಂಟಾದರೆ ವಿಳಂಬವಾಗಬಹುದು. ಮಳೆ ಬಂದರೆ, ಕಾರ್ಮಿಕರ ಕೊರತೆಯಾದರೆ ಅಡೆತಡೆ ಉಂಟಾಗಬಹುದು. ಹೀಗಾಗಿ, ಸೆಪ್ಟೆಂಬರ್ ಆಚೆಈಚೆ ಮುಗಿಯಬಹುದು. ಈಗಾಗಲೇ ಶೇ 95ರಷ್ಟು ಕಾಮಗಾರಿ ಮುಗಿದಿದೆ.
- ಮೋತಿಲಾಲ್ ನಾಯ್ಕ, ಕಾರ್ಯಪಾಲಕ ಎಂಜಿನಿಯರ್, ನಂ.5 ಭದ್ರಾ ನಾಲಾ ವಿಭಾಗ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT