ಬೇಲೂರು: ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಆರಂಭಗೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯದ 22 ಜಿಲ್ಲೆಗಳಲ್ಲಿ ವ್ಯಾಪಿಸಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಜಯಶೀಲಾ ಹೇಳಿದರು.
ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯನ್ನು ಗುರುವಾರ ಇಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಪ್ರಸಿದ್ಧಿಗೊಂಡಿಲ್ಲ. ಕೃಷಿ, ಶೈಕ್ಷಣಿಕ, ಸಾಮಾಜಿಕ ಮತ್ತು ಮಹಿಳಾ ಸಬಲೀಕರಣಕ್ಕೂ ಹೆಸರುವಾಸಿಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ 22 ಸಾವಿರ ಮಹಿಳಾ ಸಂಘಗಳು ಮತ್ತು 22 ಲಕ್ಷ ಸದಸ್ಯರನ್ನು ಹೊಂದಿದೆ. ವಿರೇಂದ್ರ ಹೆಗ್ಗಡೆಯವರ ಕನಸಿನ ಕೂಸಾಗಿರುವ ಈ ಯೋಜನೆ ಮಹಿಳೆಯರ ಸರ್ವತೋಮುಖ ಶಿಕ್ಷಣ ಮತ್ತು ತರಬೇತಿಗೆ ಒತ್ತು ನೀಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಕಾರಣವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಗೆ ಬ್ಯಾಂಕ್ಗಳು ಆರ್ಥಿಕ ಸಹಾಯ ಮಾಡಲು ಮುಂದೆ ಬರುತ್ತಿವೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ರುದ್ರಯ್ಯ, ಹೆಚ್ಚುವರಿ ತಹಶೀಲ್ದಾರ್ ಅಣ್ಣೇಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಂ. ದಯಾನಂದ್, ತೊ.ಚ. ಅನಂತಸುಬ್ಬರಾಯ, ಸದಸ್ಯ ಬಿ.ಎಲ್. ಧರ್ಮೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಡಿ. ಚಂದ್ರೇಗೌಡ, ಜಿ.ಟಿ. ಇಂದಿರಾ, ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಅನಂತು, ಶಾಂತಳಾ ವಿದ್ಯಾಸಂಸ್ಥೆ ಬಿ.ಕೆ. ಭಗವಾನ್ ಇದ್ದರು.