ರಾಮೇಶ್ವರಂ (ತಮಿಳುನಾಡು) (ಪಿಟಿಐ): ಮಂಟಪಂ ಮತ್ತು ರಾಮೇಶ್ವರಂ ಆಸುಪಾಸಿನ ಪ್ರದೇಶಗಳಿಂದ ಮೀನು ಹಿಡಿಯುತ್ತಾ ಸಮುದ್ರ ಮಧ್ಯಕ್ಕೆ ಬಂದಿದ್ದ 23 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯುವ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದರು.
ಕಳೆದ ರಾತ್ರಿ 11 ಗಂಟೆಗೆ ಮೀನುಗಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಈ ಕ್ರಮಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಶ್ರೀಲಂಕಾ ನೌಕಾಪಡೆಯು ಮೀನುಗಾರರು ಸಂಚಾರ ಮಾಡುತ್ತಿದ್ದ ಐದು ದೋಣಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಾರ್ಕಾಂಡೇಯನ್ ಹೇಳಿದರು.
ಶ್ರೀಲಂಕಾ ನೌಕಾಪಡೆ ಸಿಬ್ಬಂದಿಯಿಂದ ತಪ್ಪಿಸಿಕೊಂಡು ತನ್ನ ದೋಣಿಯೊಂದಿಗೆ ಪಾರಾಗಿ ಬಂದ ಮೀನುಗಾರನೊಬ್ಬನ ಮೂಲಕ ಈ ಘಟನೆ ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ನುಡಿದರು.
ಮನ್ನಾರ್ ನೌಕಾ ಶಿಬಿರದಲ್ಲಿ ಐದು ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಶ್ರೀಲಂಕೆಯಲ್ಲಿನ ಮನ್ನಾರ್ ಜಿಲ್ಲಾಧಿಕಾರಿ ನಂದಿನಿ ಧಿನಾನಿ ಕೂಡಾ ಹೇಳಿದ್ದಾರೆ.