ಬೆಳಗಾವಿ: ಮರಾಠಾ ಲಘು ಪದಾತಿದಳ ರೆಜಿಮೆಂಟ್ ಕೇಂದ್ರದ 232 ರಿಕ್ರೂಟ್ ಯೋಧರಿಂದ ಶನಿವಾರ ಆಕರ್ಷಕ ನಿರ್ಗಮನ ಪಥ ಸಂಚಲನ ನಡೆಯಿತು.
ನಂ. 2/11 ಗುಂಪಿನ 232 ರಿಕ್ರೂಟ್ ಯೋಧರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಷ್ಟ್ರ ರಕ್ಷಣೆ ಮಾಡಲು ದೇಶದ ವಿವಿಧ ಭಾಗಗಳಿವೆ ತೆರಳಲಿದ್ದಾರೆ.
ಬಿಎಆರ್ಸಿಯ ಡೈರೆಕ್ಟರ್ ಸೆಕ್ಯುರಿಟಿ ಆ್ಯಂಡ್ ಕೋರ್ಡಿನೇಶನ್ನ ಬ್ರಿಗೇಡಿಯರ್ ಎ. ಮಜುಮದಾರ್ ಅವರು ಪರೇಡ್ ಪರಿವೀಕ್ಷಿಸಿದರು. ಪ್ರಾಣವನ್ನು ತ್ಯಾಗ ಮಾಡಿಯಾದರೂ ದೇಶದ ರಕ್ಷಣೆ ಮಾಡುವುದಾಗಿ ರಿಕ್ರೂಟ್ ಯೋಧರು ರಾಷ್ಟ್ರಧ್ವಜ ಹಾಗೂ ರೆಜಿಮೆಂಟ್ ಧ್ವಜದ ಎದುರು ಪ್ರಮಾಣ ವಚನ ಸ್ವೀಕರಿಸಿದರು.
ಬ್ರಿಗೇಡಿಯರ್ ಮಜುಮದಾರ್ ಮಾತನಾಡಿ ದೇಶದ ಭದ್ರತೆ ಹಾಗೂ ರೆಜಿಮೆಂಟ್ನ ಗೌರವವನ್ನು ಕಾಪಾಡುವಂತೆ ಯೋಧರಿಗೆ ಸೂಚಿಸಿದರು.
ಪರೇಡ್ ಮುಖ್ಯಸ್ಥ ಮೇಜರ್ ವಿಕ್ರಾಂತ್ ಕುಮಾರ್ ಜೊತೆಗೆ ರಿಕ್ರೂಟ್ ಉಮಾಜಿ ಅಂಬ್ರೆ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ವಿವಿಧ ವಿಭಾಗಗಳಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸಮಾರಂಭದಲ್ಲಿ ಸೇನಾ ಅಧಿಕಾರಿಗಳು, ಜ್ಯೂನಿಯರ್ ಕಮಿಷನ್ ಅಧಿಕಾರಿಗಳು ಹಾಗೂ ಯೋಧರ ಕುಟುಂಬದವರು ಪಾಲ್ಗೊಂಡಿದ್ದರು.