ಬೆಂಗಳೂರು: ಕಾವೇರಿ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿದಂತೆ ವಿವಿಧ ವಿದ್ಯುತ್ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಇದೇ 24ರಂದು ಕಾವೇರಿ ಎಲ್ಲಾ ಹಂತದ ನೀರು ಪೂರೈಕೆ ಯೋಜನೆಗಳು ಆರು ಗಂಟೆಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ಇದರಿಂದಾಗಿ 24ರ ಮಧ್ಯಾಹ್ನ ಹಾಗೂ 25ರಂದು ನಗರದಾದ್ಯಂತ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾವೇರಿ 4ನೇ ಹಂತ 2ನೇ ಘಟ್ಟದ ಯೋಜನೆಗೆ ಅಗತ್ಯವಾದ ವಿದ್ಯುತ್ ಪೂರೈಸುವ ಸಲುವಾಗಿ ಹಾರೋಹಳ್ಳಿಯ ಬಳಿ 66/11 ಕೆ.ವಿ.ಯ ಎರಡು ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಒಂದು ಮಾತ್ರ ಅಳವಡಿಕೆಯಾಗಿದ್ದು, ಎರಡನೇ ಟ್ರಾನ್ಸ್ಫಾರ್ಮರ್ ಅಳವಡಿಸಬೇಕಿದೆ.
ಅದೇ ರೀತಿ ಹಾರೋಹಳ್ಳಿ ಬಳಿ ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆಗೆ ಕೆಪಿಟಿಸಿಎಲ್ನ 220 ಕೆವಿ ಮಾರ್ಗದಿಂದ ಪಡೆಯಲಾಗಿರುವ ಸಂಪರ್ಕ ಸ್ಥಗಿತಗೊಳಿಸಿ ಹೊಸದಾಗಿ ಸ್ಥಾಪಿಸಲಾಗಿರುವ 220 ಕೆ. ವಿ.ಯ ಜಾಲಕ್ಕೆ ಸಂಪರ್ಕಿಸಬೇಕಿದೆ.
ತಾತಗುಣಿಯಲ್ಲಿ ಕಾವೇರಿ 1,2 ಮತ್ತು 3ನೇ ಹಂತದ ಯೋಜನೆಯ ಓವರ್ ಹೆಡ್ ಮಾರ್ಗಗಳನ್ನು 66 ಕೆ. ವಿ, ಯು. ಜಿ ಕೇಬಲ್ ಮಾರ್ಗಕ್ಕೆ ಸಂಪರ್ಕಿಸುವಕಾರ್ಯ ಕೈಗೊಳ್ಳಬೇಕಾಗಿದ್ದು ಈ ಎಲ್ಲ ಉದ್ದೇಶಗಳಿಗಾಗಿ 6 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಜಲಮಂಡಳಿ ವಿನಂತಿಸಿದೆ.