ಬೀದರ್: ದೇಶದಲ್ಲಿ ಸುಮಾರು 24 ಕೋಟಿ ಜನ ತಂಬಾಕಿನ ದಾಸರಾಗಿದ್ದಾರೆ ಎಂದು ಡಾ. ಸಿ. ಆನಂದರಾವ ಹೇಳಿದರು.ಡಾ. ನಿರ್ಣಿ ಕ್ಯಾನ್ಸರ್ ಫೌಂಡೇಶನ್ ವತಿಯಿಂದ ನಗರದ ಬಾಲಾಜಿ ಸ್ಕಿನ್ ಕೇರ್ ಸೆಂಟರ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾನ್ಸರ್ ರೋಗವನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಆದರೆ, ಜನ ಕಾಯಿಲೆಗೆ ಕಾರಣವಾಗುವ ದುಶ್ಚಟಗಳಿಂದ ಮುಕ್ತರಾಗಬೇಕು. ಅದಕ್ಕಾಗಿ ನಡಿಗೆ, ವ್ಯಾಯಾಮ, ಯೋಗ, ಈಜು, ಆಟ, ಜಾಗಿಂಗ್ ಮತ್ತಿತರ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ತಂಬಾಕು ಸೇವನೆಯಿಂದ ಗಂಟಲು, ಧ್ವನಿಪೆಟ್ಟಿಗೆ ಕ್ಯಾನ್ಸರ್ ಉಂಟಾಗಬಹುದು. ರಕ್ತ ನಾಳಗಳು ಸಂಕುಚಿತಗೊಂಡು ಹೃದಯಾಘಾತ, ಪಾರ್ಶ್ವವಾಯು, ಮೆದುಳಿದನ ದೌರ್ಬಲ್ಯ ಮತ್ತಿತರ ರೋಗಗಳು ಬರುವ ಸಾಧ್ಯತೆಗಳಿವೆ ಎಂದು ಡಾ. ಅಶೋಕಕುಮಾರ ನಾಗೂರೆ ಹೇಳಿದರು.
ಕ್ಯಾನ್ಸರ್ ತಡೆಗಟ್ಟಲು ಕಚ್ಚಾ ಮಾವು, ಪಪಾಯಿ, ತಾಜಾ ಹಣ್ಣು, ತರಕಾರಿ ಪಾನೀಯ, ತೋಕೆ ಗೋಧಿ ಆಹಾರ, ಕಡಿಮೆ ಉಪ್ಪು ಬಳಕೆ, ಕೆನೆ ತೆಗೆದ ಹಾಲು, ಮಜ್ಜಿಗೆ, ಅಣಬೆ, ಎಲೆ ಕೋಸು, ಹೂಕೋಸು, ಮೊಳಕೆ ಕಾಳು, ಧಾನ್ಯಕಾಳು, ಹಾಗೂ ಹೆಚ್ಚು ನಾರುಯುಕ್ತ ಆಹಾರ ಸೇವಿಸಬೇಕು ಎಂದು ತಿಳಿಸಿದರು
ಭಾರತೀಯ ಆಹಾರ ನಿಗಮದ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿದರು. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ನಿರೂಪಿಸಿದರು. ಮಹಾಂತೇಶ ಗುಲ್ಬರ್ಗ ವಂದಿಸಿದರು.