ಬೀದರ್: ಬಂಗಾಳಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಶುಕ್ರವಾರವು ಮೋಡಕವಿದ ವಾತಾವರಣ ಮತ್ತು ದಿನಪೂರ್ತಿ ಜಿಟಿ ಜಿಟಿ ಮಳೆ ಸುರಿದಿದ್ದು, ಜನಜೀವನ ಎರಡನೇ ದಿನವೂ ಅಸ್ತವ್ಯಸ್ತಗೊಂಡಿತು.
ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನೀರು ಹರಿಯಿತು. ಒಳಚರಂಡಿ ವ್ಯವಸ್ಥೆಯ ಲೋಪದ ಪರಿಣಾಮ, ನಗರದ ಬಹುತೇಕ ಕಡೇ ರಸ್ತೆಗಳಲ್ಲಿ ನೀರು ನಿಂತು ವಾಹನ ಚಾಲನೆಗೆ ದ್ವಿಚಕ್ರ ವಾಹನಗಳ ಚಾಲಕರುಪರದಾಡಿದರು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಮುಂಗಾರು ಬೆಳೆಗೆ ಪೂರಕವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕದ ಮಾಹಿತಿ ಅನುಸಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 270 ಮಿ.ಮೀ. ಮಳೆಯಾಗಿದೆ.
ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾದ ವರದಿ ಬಂದಿವೆ. ಬೀದರ್ ತಾಲ್ಲೂಕಿನಲ್ಲಿ ಒಟ್ಟರೆ 66.5 ಮಿ.ಮೀ ಮಳೆ ಆಗಿದ್ದರೆ; ಔರಾದ್ ತಾಲ್ಲೂಕಿನಲ್ಲಿ 34 ಮಿ.ಮೀ. ಮಳೆಯಾಗಿದೆ. ಉಳಿದಂತೆ, ಬಸವಕಲ್ಯಾಣ ತಾಲ್ಲೂಕು 51.5 ಮಿ.ಮೀ. ಭಾಲ್ಕಿ ತಾಲ್ಲೂಕು 65.5 ಮತ್ತು ಹುಮನಾಬಾದ್ ತಾಲ್ಲೂಕು 52.5 ಮಿ.ಮೀ ಮಳೆ ಆಗಿದೆ.
ಜೂನ್ ತಿಂಗಳಲ್ಲಿಯೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆ 132.4 ಮಿ.ಮೀ. ಆಗಿದ್ದು, ವಾಸ್ತವವಾಗಿ 128.7 ಮಿ.ಮೀ. ಮಳೆಯಾಗಿತ್ತು. ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 191 ಮಿ.ಮೀ. ಆಗಿದ್ದು, ಇದುವರೆಗೂ ಒಟ್ಟು 140.9 ಮಿ.ಮೀ. ಮಳೆ ಸುರಿದಿದೆ.
ಮನೆಗೆ ಹರಿದ ನೀರು: ನಗರದ ಕೆಇಬಿ ವಸತಿ ಗೃಹ ತಗ್ಗು ಪ್ರದೇಶದಲ್ಲಿದ್ದು ಸರಾಗ ಹರಿವು ಮಳೆ ನೀರು ಇಲ್ಲದೇ ನಿಂತಿದ್ದು, ಮನೆಗಳಿಗೂ ಹರಿಯಿತು. `ಮಳೆ ಬಂದರೆ ಈ ಸಮಸ್ಯೆ ಸಾಮಾನ್ಯ. ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅವರು ಪರಿಹಾರ ಒದಗಿಸಲು ಮುಂದಾಗಿಲ್ಲ' ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.