ಬೆಂಗಳೂರು: ‘ಹೆಣ್ಣು ಮಕ್ಕಳನ್ನು ದೇವರೆಂದು ಪೂಜಿಸುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ 24,600 ಹೆಣ್ಣುಮಕ್ಕಳು ನಾಪತ್ತೆ ಯಾಗಿದ್ದಾರೆ. ಏಕೆ ಹೀಗಾಯಿತು ಎಂದು ಕೇಳಿದರೆ ಯಾರಿಂದಲೂ ಉತ್ತರ ಇಲ್ಲ. ಈ ಕುರಿತು ಸಮಗ್ರ ತನಿಖೆ ಆಗಬೇಕು’ ಎಂದು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷತೆ ಶಕುಂತಲಾ ಟಿ.ಶೆಟ್ಟಿ ಶುಕ್ರವಾರ ಇಲ್ಲಿ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ 333 ಯುವತಿಯರು ನಾಪತ್ತೆಯಾ ಗಿದ್ದಾರೆ. ಇದು ಕೂಡ ಆಘಾತಕಾರಿ ಅಂಶ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದುಕಾಣುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೋಹನ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದಾಗ 25 ಮಂದಿ ಯುವತಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂತು. ಇದೇ ರೀತಿ ಪೊಲೀಸರು ಇನ್ನೂ ಹೆಚ್ಚಿನ ಶ್ರಮ ಹಾಕಿ ತನಿಖೆ ನಡೆಸಿದರೆ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಕರಾವಳಿ ಭಾಗದಲ್ಲಿ ‘ಲವ್ ಜಿಹಾದಿ’ ಇರುವುದನ್ನು ಒಪ್ಪಿಕೊಂಡ ಅವರು, ಆ ಕುರಿತು ಯುವತಿಯರನ್ನು ಪ್ರಶ್ನೆ ಮಾಡಿದರೆ ತಮ್ಮ ಇಚ್ಛೆ ಪ್ರಕಾರವೇ ತಾವು ಹೋಗಿದ್ದಾಗಿ ಹೇಳುತ್ತಾರೆ. ಹೀಗಾಗಿ ಇದನ್ನು ಸಾಬೀತುಪಡಿ ಸುವುದು ಕಷ್ಟ. ಆದರೂ ಕೆಲವೊಂದು ಕಡೆ ಇದೆ ಎಂದರು.
ಹಿಂದಿನ ಸಮಿತಿಯ ಶಿಫಾರಸಿನಂತೆ ರಾಜ್ಯ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ 10 ತ್ವರಿತ ನ್ಯಾಯಾಲಯ ಗಳನ್ನು ಆರಂಭಿಸಿದೆ ಎಂದು ಅವರು ಹೇಳಿದರು. ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿಯ ಕೊರತೆ ಹೆಚ್ಚಾಗಿದೆ. ಹೆಚ್ಚು ಸಿಬ್ಬಂದಿಯ ನೇಮಕಕ್ಕೆ ಆದ್ಯತೆ ನೀಡ ಬೇಕು ಎಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದರು.
ಸಮಿತಿ ಸದಸ್ಯರಾದ ಶಶಿಕಲಾ ಜೊಲ್ಲೆ, ಶಾರದಾ ಮೋಹನ ಶೆಟ್ಟಿ, ವೈ. ರಾಮಕ್ಕ, ಗಾಯಿತ್ರಿ ಶಾಂತೇಗೌಡ, ಎಸ್.ಟಿ.ಸೋಮಶೇಖರ್, ಬಿ.ಎಚ್. ಶ್ರೀನಿವಾಸ್ ಸಭೆಯಲ್ಲಿ ಹಾಜರಿದ್ದರು.