ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಹಣಕಾಸು ನೀತಿಯ ಮೂರನೆಯ ತ್ರೈಮಾಸಿಕ ಅವಧಿಯ ಪರಾಮರ್ಶೆಯನ್ನು ಜನವರಿ 24ರಂದು ಪ್ರಕಟಿಸಲಿದೆ.
`ಅಗತ್ಯ ವಸ್ತುಗಳ ದರಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಈ ಸಂಗತಿಯನ್ನು ಪ್ರಮುಖವಾಗಿ ಪರಿಗಣಿಸಲಾಗುವುದು ಎಂದು `ಆರ್ಬಿಐ~ ಡೆಪ್ಯುಟಿ ಗವರ್ನರ್ ಸುಭೀರ್ ಗೋಕರ್ಣ ಹೇಳಿದ್ದಾರೆ.
`ಆರ್ಬಿಐ~ ಬಡ್ಡಿ ದರ ಇಳಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿರುವ ಉದ್ಯಮ ವಲಯ, ಇದರಿಂದ ದೇಶದ ಕೈಗಾರಿಕೆ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ಲಭಿಸಲಿದೆ ಎಂದು ಹೇಳಿದೆ.
ಕಳೆದ ನವೆಂಬರ್ ತಿಂಗಳಲ್ಲಿ ದೇಶದ ಕೈಗಾರಿಕೆ ಉತ್ಪಾದನೆ ವೃದ್ಧಿ ದರ (ಐಐಪಿ) ಶೇ 5.9ಕ್ಕೆ ಏರಿಕೆಯಾಗಿದೆ. ಬಡ್ಡಿ ದರ ಹೆಚ್ಚಳದಿಂದ ಹೂಡಿಕೆ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದ್ದು, `ಆರ್ಬಿಐ~ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಕೈಗಾರಿಕೋದ್ಯಮಿಗಳು ಆಗ್ರಹಿಸಿದ್ದಾರೆ.
`ಆಹಾರ ಹಣದುಬ್ಬರಕ್ಕೂ ವಿತ್ತೀಯ ಪರಾಮರ್ಶೆ ನಿರ್ಧಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದಾಗ್ಯೂ ಅಗತ್ಯ ವಸ್ತುಗಳ ದರಗಳು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತವೆ~ ಎಂದು ಗೋಕರ್ಣ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಎರಡು ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಕನಿಷ್ಠ ಮಟ್ಟಕ್ಕೆ ಕುಸಿದ್ದಿದ್ದು ಶೇ (-) 2.90ರಷ್ಟಾಗಿದೆ. ನವೆಂಬರ್ ತಿಂಗಳಲ್ಲಿ ಒಟ್ಟಾರೆ ಹಣದುಬ್ಬರ ದರ (ಡಬ್ಲ್ಯುಪಿಐ) ಶೇ 9.11ಕ್ಕೆ ಇಳಿಕೆ ಕಂಡಿದೆ.