ದಾಂಡೇಲಿ: ಸ್ಥಳೀಯ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಯು ವಿಜಯ ದಶಮಿಯಂದು (ಅ.24) `ರಾಮಲೀಲಾ ಉತ್ಸವ~ ವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ನಗರದ ಬಂಗೂರುನಗರ ಡೀಲಕ್ಸ್ ಮೈದಾನದಲ್ಲಿ ಈಗಾಗಲೇ ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ. ಈ ಬಾರಿ 52 ಅಡಿ ಎತ್ತರದ ರಾವಣ ಹಾಗೂ 45 ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಬಿದಿರಿನ ಪ್ರತಿಕೃತಿಗಳನ್ನು ತೇರಗಾಂವದ ಕಲಾವಿದ ಉಮೇಶ ಮರಿಯಪ್ಪ ರಾವುತ್ ನಿರ್ಮಿಸಿದ್ದಾರೆ. ಇದಕ್ಕೆ ಸುಮಾರು ರೂ 1.50 ಲಕ್ಷ ವೆಚ್ಚ ಮಾಡಲಾಗಿದೆ.
ವಿಜಾಪುರದ ಎಲ್.ಸಿ.ಶಹಪೂರಕರ ಮತ್ತು ಹುಬ್ಬಳ್ಳಿಯ ಎಂ.ಡಿ.ನಿಂಬುವಾಲಾ ಆಂಡ್ ಸನ್ಸ್ ಕಂಪೆನಿಯವರು ಸಿಡಿಮದ್ದನ್ನು ಅಳವಡಿಸಿದ್ದಾರೆ. ಇದಕ್ಕಾಗಿ ಸುಮಾರು ರೂ 8 ಲಕ್ಷ ಖರ್ಚು ಮಾಡಲಾಗಿದೆ.
24ರಂದು ಸಂಜೆ 6.30ರಿಂದ 8 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮ ನೋಡಲು ರಾಜ್ಯ, ಹೊರ ರಾಜ್ಯಗಳಿಂದ ಸುಮಾರು 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ಕಾರ್ಖಾನೆ ಅಭಿವೃದ್ಧಿ ಹಾಗೂ ಕ್ರೀಡಾ ಸಮಿತಿಯ ಕಾರ್ಯದರ್ಶಿ ರಾಜೇಶ ತಿವಾರಿ, ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಕೆ.ಜಿ.ಗಿರಿರಾಜ ತಿಳಿಸಿದ್ದಾರೆ.