ನವದೆಹಲಿ (ಐಎಎನ್ಎಸ್): ಜಾರ್ಖಂಡ್ನ ಝಾರಿಯಾ ಕಲ್ಲಿದ್ದಲು ನಿಕ್ಷೇಪದ ಭೂಗರ್ಭದಲ್ಲಿ 25 ವರ್ಷಗಳಿಂದ ಹೊಗೆಯಾಡುತ್ತಿರುವ ಕಲ್ಲಿದ್ದಲು ಉರಿಯನ್ನು ಯಾವ ತಂತ್ರಜ್ಞಾನದಿಂದಲೂ ಆರಿಸಲಾಗದು ಎಂಬ ಹೇಳಿಕೆಗಳನ್ನು ನಂಬಲಾಗದು ಎಂದು ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
25 ವರ್ಷಗಳಿಂದ ಲಕ್ಷಗಟ್ಟಲೆ ಟನ್ ಕಲ್ಲಿದ್ದಲು ಉರಿದು ಬೂದಿಯಾಗಿದ್ದರೂ ಪರಿಹಾರ ಹುಡುಕಲು ಸಾಧ್ಯವಾಗಿಲ್ಲ ಎಂಬುದು ನಂಬಲಾಗದ ಸಂಗತಿ ಎಂದು ಇಂಧನ ಭದ್ರತಾ ಸಮಾವೇಶದಲ್ಲಿ ಅವರು ಅಭಿಪ್ರಾಯಪಟ್ಟರು. ಧನ್ಬಾದ್ ಜಿಲ್ಲೆ ಯ ಝಾರಿಯಾ ನಿಕ್ಷೇಪದಲ್ಲಿ 10 ಸಾವಿರ ಲಕ್ಷ ಟನ್ ಕಲ್ಲಿದ್ದಲು ಇರಬಹುದೆಂಬುದು ತಜ್ಞರ ಅಂದಾಜಾಗಿದೆ.
ಇಲ್ಲಿರುವ ಜನರನ್ನು ಸ್ಥಳಾಂತರಿಸಿದರೆ ಮಾತ್ರ ಈ ಕಲ್ಲಿದ್ದಲನ್ನು ಗಣಿಗಾರಿಕೆ ನಡೆಸಿ ಹೊರತೆಗೆಯಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಕಲ್ಲಿದ್ದಲು ಉರಿದು ಬೂದಿಯಾಗುತ್ತಿರುವುದು ಮೊತ್ತಮೊದಲ ಬಾರಿಗೆ ಪತ್ತೆಯಾದದ್ದು 1916ರಲ್ಲಿ. ನಂತರ, 1970ರಲ್ಲಿ ಇದು ಹರಡಲು ಆರಂಭವಾಯಿತು.