ಹಿರಿಯೂರು: ರಾಜ್ಯದ ಪ್ರತಿಯೊಂದೂ ತಾಲ್ಲೂಕು ಕೇಂದ್ರದಲ್ಲಿ, ಜತೆಗೆ ದೇಶದ 25 ಸಾವಿರ ಊರುಗಳಲ್ಲಿ ಪ್ರೊಫೆಷನಲ್ ಕೊರಿಯರ್ಸ್ ಸೇವೆ ಆರಂಭಿಸಲಾಗಿದೆ ಎಂದು ಕೊರಿಯರ್ಸ್ನ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಶ್ರೀನಾಥ್ ತಿಳಿಸಿದರು.ನಗರದಲ್ಲಿ ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಳ್ಳಾರಿ ವಲಯದ ಅಧಿಕಾರಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
1982ರಲ್ಲಿ ಕೊರಿಯರ್ಸ್ ಸೇವೆ ಆರಂಭಿಸಿದ್ದು, ಗ್ರಾಹಕರ ಪತ್ರಗಳು ಹಾಗೂ ಪಾರ್ಸೆಲ್ ತಲುಪಿಸುವ ಸೇವೆಯನ್ನು ಮಾಡಲಾಗುತ್ತಿದೆ. ಕೊರಿಯರ್ಸ್ ಸೇವೆ ಈಗ ಆಧುನೀಕರಣಗೊಂಡಿದ್ದು, ಗ್ರಾಹಕರು ಕಳುಹಿಸಿದ ಪತ್ರಗಳು ಅಥವಾ ಪಾರ್ಸೆಲ್ಗಳ ಸ್ವೀಕೃತಿ ಮತ್ತು ರವಾನೆ ಕುರಿತಂತೆ 90 ದಿನಗಳವರೆಗೆ ನಮ್ಮ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಅವಧಿಯನ್ನು 180 ದಿನಗಳಿಗೆ ಹೆಚ್ಚಿಸಲಾಗುವುದು. ಇನ್ನು ಮುಂದೆ ಗ್ರಾಹಕರ ಪತ್ರಗಳು ತಲುಪಿರುವ ಬಗ್ಗೆ ಮೊಬೈಲ್ನಲ್ಲಿ ಸಂದೇಶ ರವಾನಿಸಲಾಗುವುದು ಎಂದು ಅವರು ವಿವರಿಸಿದರು.
1999ರಲ್ಲಿ ಅಂತರರಾಷ್ಟ್ರೀಯ ಕೊರಿಯರ್ಸ್ ಸೇವೆ ಆರಂಭಿಸಲಾಯಿತು. ನ್ಯೂಯಾರ್ಕ್, ದುಬೈ, ಸಿಂಗಪೂರ್ಗಳಲ್ಲಿ ಕಚೇರಿ ಆರಂಭಿಸಲಾಗಿದೆ. 2011ರಲ್ಲಿ ಇನ್ನೂ ಹತ್ತು ದೇಶಗಳಿಗೆ ಸೇವೆಯನ್ನು ವಿಸ್ತರಿಸಿ, 2015 ರ ವೇಳೆಗೆ ವಿದೇಶೀ ಸೇವೆಯನ್ನು ದ್ವಿಗುಣಗೊಳಿಸಲಾಗುವುದು. ನಾವು ನೀಡುತ್ತಿರುವ ಗುಣಮಟ್ಟದ ಸೇವೆಗೆ ಐಎಸ್ಒ -9001 ಪ್ರಮಾಣ ಪತ್ರ ದೊರೆತಿದೆ. ಎಂದು ಬಳ್ಳಾರಿ ವಲಯ ವ್ಯವಸ್ಥಾಪಕ ಎಂ.ಯು. ಶಿವರಾಂ ತಿಳಿಸಿದರು.
ಚಿತ್ರದುರ್ಗದ ನಾಗರಾಜ್, ನಟರಾಜ್, ಗೋಪಿನಾಥ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.