ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2002-03ನೇ ಸಾಲಿನಿಂದ 2009-10ನೇ ಹಣಕಾಸು ವರ್ಷದವರೆಗೆ ಒಟ್ಟು 258 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಸಂಸ್ಥೆ ಪೂರ್ಣಗೊಳಿಸಿದ್ದು, ಪಾಲಿಕೆ ಈವರೆಗೆ ರೂ 136.76 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬಾಕಿಯಿರುವ 121.24 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯ (ಕೆಆರ್ಐಡಿಎಲ್) ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ಶಿವಣ್ಣ ಸ್ಪಷ್ಟಪಡಿಸಿದ್ದಾರೆ.
ಪಾಲಿಕೆಯು ಮೇಲ್ಕಂಡ ಅವಧಿಯಲ್ಲಿ ಒಟ್ಟು 976 ಕಾಮಗಾರಿಗಳನ್ನು ಸಂಸ್ಥೆಗೆ ವಹಿಸಿದ್ದು, ಆ ಪೈಕಿ 809 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 659 ಕೆಲಸಗಳು ಪೂರ್ಣಗೊಂಡಿದ್ದು, 150 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಟಿಪಿ) ಹಾಗೂ 4ಜಿ ನಿಯಮದಲ್ಲಿನ ವಿನಾಯಿತಿ ಪ್ರಕಾರ ಪಾಲಿಕೆಯು ವಿವಿಧ ಕಾಮಗಾರಿಗಳನ್ನು ಕೆಆರ್ಐಡಿಎಲ್ ಸಂಸ್ಥೆಗೆ ವಹಿಸಿದೆ. ಎಲ್ಲ ಕಾಮಗಾರಿಗಳಿಗೂ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ಪಡೆಯಲಾಗಿದೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ಪಡೆಯದೆ ಯಾವುದೇ ಕಾಮಗಾರಿಯನ್ನು ಅಕ್ರಮವಾಗಿ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.