ಬೀದರ್: ಬಸವಾದಿ ಶರಣರ ವಚನಗಳನ್ನು ಜನಮನಕ್ಕೆ ಮುಟ್ಟಿಸುವ ಉದ್ದೇಶದೊಂದಿಗೆ ಮಹಾರಾಷ್ಟ್ರ ಬಸವ ಪರಿಷತ್ತು ನೇತೃತ್ವದಲ್ಲಿ ಇದೇ 25ರಿಂದ ಮಹಾರಾಷ್ಟ್ರದಾದ್ಯಂತ ಬಸವಜ್ಯೋತಿ ಸಂದೇಶ ಯಾತ್ರೆ ನಡೆಯಲಿದೆ.
ಇದುವರೆಗೂ ಮೂರು ಬಾರಿ ಬಸವ ಸಂದೇಶ ಯಾತ್ರೆ ನಡೆದಿದ್ದು, ಈಗ ಬಸವಣ್ಣನವರ ಜಯಂತಿ ಆಚರಣೆಯ ಶತಮಾನೋತ್ಸವ ನಿಮಿತ್ತ ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಇದರ ನೇತೃತ್ವ ವಹಿಸಲಿರುವ ಭಾಲ್ಕಿ ಮಠದ ಡಾ. ಬಸವಲಿಂಗ ಪಟ್ಟದ್ದೇವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಯಾತ್ರೆಯು ಇದೇ 25ರಿಂದ ಲಾತೂರ್ನಲ್ಲಿ ಆರಂಭವಾಗಲಿದ್ದು, ನವೆಂಬರ್ 29ರಂದು ಸೋಲಾಪುರದ ಮಂಗಳವೇಡಾದಲ್ಲಿ ಸಮಾರೋಪಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಬಸವಣ್ಣನವರು ಕೆಲ ಕಾಲ ನೆಲೆಸಿದ್ದ ಮಂಗಳವೇಡಾದಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಬಗೆಗೂ ಗಮನ ಸೆಳೆಯಲಾಗುವುದು ಎಂದರು.
36 ದಿನಗಳ ಈ ಯಾತ್ರೆಯಲ್ಲಿ ಒಟ್ಟಾರೆ ಸುಮಾರು 5 ಸಾವಿರ ಕಿ.ಮೀ. ದೂರ ಯಾತ್ರೆ ಕ್ರಮಿಸಲಿದೆ. ಭಾಲ್ಕಿ ಚನ್ನಬಸವಾ ಶ್ರಮದಲ್ಲಿ 25ರಂದು ಯಾತ್ರೆಗೆ ಬೀಳ್ಕೊಡಲಾಗುವುದು. ಬಸವಾದಿ ಶರಣರ ಭಾವಚಿತ್ರಗಳಿಂದ ಅಲಂಕೃತಗೊಂಡ ರಥ ತೆರಳಲಿದೆ ಎಂದರು.