ಇಸ್ಲಾಮಾಬಾದ್(ಐಎಎನ್ಎಸ್):`ಮುಂಬೈನಲ್ಲಿ 26/11ರಂದು ನಡೆದ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಗುರುತಿಸಿ, ಶಿಕ್ಷೆಗೊಳಪಡಿಸಬೇಕು' ಎಂದು ಶುಕ್ರವಾರ `ದಿ ಡೈಲಿ ಟೈಮ್ಸ' ಸಂಪಾದಕೀಯದಲ್ಲಿ ಆಗ್ರಹಿಸಲಾಗಿದೆ.
`ದಾಳಿಯಲ್ಲಿ ಬದುಕುಳಿದವರು ಹಾಗೂ ಮೃತರ ಸಂಬಂಧಿಕರು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಅಮೆರಿಕ ವಿದೇಶಾಂಗ ಇಲಾಖೆಯು ಐಎಸ್ಐ ಹಾಗೂ ಅದರ ಮಾಜಿ ಮುಖ್ಯಸ್ಥರಿಗೆ ವಿಚಾರಣೆಯಿಂದ ವಿನಾಯ್ತಿ ನೀಡಿದೆ' ಎಂದೂ ಪತ್ರಿಕೆ ಉಲ್ಲೇಖಿಸಿದೆ.
`ಭಾರತವು ಅಮೆರಿಕದ ಈ ತೀರ್ಪನ್ನು ತಿರಸ್ಕರಿಸಿದ್ದು, ದಾಳಿಕೋರರಿಗೆ ಶಿಕ್ಷೆ ನೀಡಬೇಕೆನ್ನುವ ಅಮೆರಿಕದ ದೃಢ ಸಂಕಲ್ಪಕ್ಕೆ ಇದು ವ್ಯತಿರಿಕ್ತವಾದ ನಿರ್ಧಾರ ಎಂದಿದೆ. ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದ್ದು, ಭಾರತ ಯಾಕೆ ಈ ರೀತಿ ಪ್ರತಿಕ್ರಿಯಿಸಿದೆ ಎನ್ನುವುದು ಅರ್ಥವಾಗುತ್ತಿಲ್ಲ' ಎಂದು ಪತ್ರಿಕೆ ಹೇಳಿದೆ.
`ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನವು ಪಾರದರ್ಶಕ ರೀತಿಯಲ್ಲಿ ಸಹಕರಿಸಬೇಕಿದೆ. ಮುಂಬೈ ದಾಳಿಯು ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಗೆ ಅಡ್ಡಿ ತಂದಿದೆ ಎನ್ನುವುದನ್ನು ಭಾರತ ಹಾಗೂ ಪಾಕ್ ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿವೆ' ಎಂದೂ ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ.
ಸಂತ್ರಸ್ತ ಕುಟುಂಬಕ್ಕೆ ಅಸಮಾಧಾನ
ವಾಷಿಂಗ್ಟನ್ (ಪಿಟಿಐ): 26/11ರ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್ಐ ಹಾಗೂ ಅದರ ಮುಖ್ಯಸ್ಥರಾಗಿದ್ದ ಅಹಮದ್ ಶುಜಾ ಪಾಶಾ ಮತ್ತು ನದೀಮ್ ತಾಜ್ ಅವರಿಗೆ ಅಮೆರಿಕ ಸರ್ಕಾರ ವಿಚಾರಣೆಯಿಂದ ವಿನಾಯ್ತಿ ನೀಡಿದ್ದಕ್ಕೆ ದಾಳಿಯಲ್ಲಿ ಮೃತಪಟ್ಟ ಅಮೆರಿಕ ಪ್ರಜೆಗಳ ಕುಟುಂಬ ವರ್ಗದವರು ಅಸಮಾಧಾನಗೊಂಡಿದ್ದಾರೆ.