ನವದೆಹಲಿ: ರಾಜಧಾನಿಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸುವುದರೊಂದಿಗೆ ‘ಆಮ್ ಆದ್ಮಿ ಪಕ್ಷ’ವು (ಎಎಪಿ) ಕಳೆದೆರಡು ವಾರದಿಂದ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಲು ಮುಂದಾಗಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ಎಎಪಿ ಅಧಿಕಾರ ಹಿಡಿಯಲಿದೆ.
ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅರವಿಂದ ಕೇಜ್ರಿವಾಲ್ ಇದೇ 26ರಂದು ರಾಮಲೀಲಾ ಮೈದಾನದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಬಯಸಿದ್ದಾರೆ.
ಎರಡು ವರ್ಷದ ಹಿಂದೆ ಇದೇ ಮೈದಾನದಲ್ಲಿ ‘ಜನ ಲೋಕಪಾಲ ಮಸೂದೆ’ ಜಾರಿಗೆ ಹೋರಾಟ ನಡೆದಿತ್ತು. ಮಾಜಿ ಐಆರ್ಎಸ್ ಅಧಿಕಾರಿಯಾದ ಕೇಜ್ರಿವಾಲ್ ಸೋಮವಾರ ದೆಹಲಿ ಲೆ. ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು.
‘ಸರ್ಕಾರ ರಚಿಸುವ ಪ್ರಸ್ತಾವವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ತೀರ್ಮಾನಕ್ಕಾಗಿ ಕಳುಹಿಸಲಾಗುವುದು. ಅವರಿಂದ ಉತ್ತರ ಬಂದ ಬಳಿಕ ಪ್ರಮಾಣ ವಚನ ದಿನಾಂಕ, ಸಮಯ ನಿಗದಿಪಡಿಸಲಾ-ಗುವುದು’ ಎಂದು ಲೆಫ್ಟಿನೆಂಟ್ ಗವರ್ನರ್ ಅವರು ತಿಳಿಸಿದ್ದಾರೆ. ‘ಸರ್ಕಾರ ರಚಿಸಿದ ಬಳಿಕ ವಿಧಾನಸಭೆಯಲ್ಲಿ ವಿಶ್ವಾಸಮತ ಕೇಳುವ ನಿರ್ಣಯ ಮಂಡಿಸುತ್ತೇವೆ’ ಎಂದು ಕೇಜ್ರಿವಾಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.