ಗುಂಡ್ಲುಪೇಟೆ: ತಾಲ್ಲೂಕಿನ ಅರಣ್ಯ ಭಾಗಗಳ ಮೂಲಕ ಅಕ್ರಮವಾಗಿ ಜಾನುವಾರುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ವಾಹನವನ್ನು ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಸೋಮವಾರ ವಶಪಡಿಸಿಕೊಂಡು ಗುಂಡ್ಲುಪೇಟೆ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಪ್ರಾಣಿ ದಯಾ ಸಂಸ್ಥೆ ‘ಗೌ ಗ್ಯಾನ್ ಫೌಂಡೇಷನ್’ನ ನಾಲ್ವರು ಕಾರ್ಯಕರ್ತರಾದ ಪ್ರಸಾದ್, ಸೋನು, ಸಿಂಗ್ ಹಾಗೂ ಜೋಷನ್ ಆ್ಯಂಟನಿ ಅವರು ಮೂಲೆಹೊಳೆ ಗಡಿ ಭಾಗದಲ್ಲಿ ವಾಹನದಲ್ಲಿ ಕಾದು ಕುಳಿತು ಜಾನುವಾರುಗಳ ಅಕ್ರಮ ಸಾಗಾಣಿಕೆಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡರು. ಅದೇ ದಾರಿಯಲ್ಲಿ ಬಂದ ಕಂಟೈನರ್ ವಾಹನವನ್ನು ತಡೆದು, ಪರಿಶೀಲಿಸಿದಾಗ ಅದರಲ್ಲಿ 27 ಜಾನುವಾರುಗಳನ್ನು ತುಂಬಿಸಲಾಗಿತ್ತು.
ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಪಿರಿಯಾಪಟ್ಟಣ ಮೂಲದ ಚಾಲಕ ತನ್ವೀರ್(19), ಅವನ ಸಹಚರ ನಾಸೀರ್ (19) ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇದೇ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಕಂಟೈನರ್ ವಾಹನದ ಬಳಿ ದೂರು ನೀಡಿದ ಕಾರ್ಯಕರ್ತರಿಂದ ಮಾಹಿತಿ ಪಡೆಯುತ್ತಿದ್ದಾಗ ವಾಹನಗಳನ್ನು ಚೆಕ್ಪೋಸ್ಟ್ನಿಂದ ದಾಟಲು ಸಹಾಯ ಮಾಡುವ ಮಧ್ಯವರ್ತಿಯ ಕಡೆಯ ಯುವಕರ ಗುಂಪು ಕಾರ್ಯಕರ್ತರಾದ ಪ್ರಸಾದ್ ಮತ್ತು ಜೋಷನ್, ಆ್ಯಂಟನಿಯವರ ಮೇಲೆ ಹಲ್ಲೆ ನಡೆಸಲು ಮುಂದಾಯಿತು.
ಅವರ ಬಳಿಯಲ್ಲಿದ್ದ ಕ್ಯಾಮೆರಾವನ್ನು ಕಿತ್ತುಕೊಂಡು ಚಿತ್ರೀಕರಣಗೊಂಡಿದ್ದ ದೃಶ್ಯಗಳನ್ನು ಮತ್ತು ಕ್ಯಾಮೆರಾವನ್ನ ನಾಶಪಡಿಸಿದರು. ಈ ಸಂದರ್ಭ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಕಾರ್ಯಕರ್ತ ಪ್ರಸಾದ್ ವಿಷಾದ ವ್ಯಕ್ತಪಡಿಸಿದರು.
ಹಲ್ಲೆ ನಡೆಸಲು ಮುಂದಾದ ಮಧ್ಯವರ್ತಿ ಮತ್ತು ಅವರ ಕಡೆಯವರ ಮೇಲೆ ದೂರು ದಾಖಲಿಸಲು ಮುಂದಾದಾಗ ಒಂದು ದೂರು ದಾಖಲಾದ ನಂತರ ಮತ್ತೊಂದು ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಪ್ರಸಾದ್
ವರದಿಗಾರರಿಗೆ ಮಾಹಿತಿ ನೀಡಿದರು.
ಇದಲ್ಲದೆ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರಿಗೆ ಸಹಾಯ ಮಾಡಲು ಬಂದ ಸ್ಥಳೀಯರನ್ನು ಕೆಲವು ವ್ಯಕ್ತಿಗಳು ಬೆದರಿಸುತ್ತಿದ್ದುದು ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.