ಬೆಂಗಳೂರು: ಬೆಂಗಳೂರು ಲಿಟರೇಚರ್ ಫೆಸ್ಟ್ (ಬಿಎಲ್ಎಫ್) ಸಮಿತಿ ವತಿಯಿಂದ ‘ಬೆಂಗಳೂರು ಸಾಹಿತ್ಯೋತ್ಸವ’ದ ಎರಡನೇ ಆವೃತ್ತಿ ಇದೇ 27ರಿಂದ 29ರ ವರೆಗೆ ಎಲೆಕ್ಟ್ರಾನಿಕ್ ಸಿಟಿಯ ವೇಲಾಂಗಣಿ ಪಾರ್ಕ್ನಲ್ಲಿ ನಡೆಯಲಿದೆ.
‘ಸಾಹಿತ್ಯೋತ್ಸವದಲ್ಲಿ ಗುಲ್ಜಾರ್, ವಿಲಿಯಂ ಡಾಲ್ರಿಂಪಲ್, ಯು.ಆರ್. ಅನಂತಮೂರ್ತಿ, ರಾಜ್ಮೋಹನ್ ಗಾಂಧಿ, ಚಂದ್ರಶೇಖರ ಕಂಬಾರ, ರಾಮಚಂದ್ರ ಗುಹಾ, ನವನೀತ ದೇವ್ಸೇನ್, ರಾಕೇಶ್, ನಿಸಾರ್ ಅಹ್ಮದ್, ಎಚ್.ಎಸ್.ವೆಂಕಟೇಶಮೂರ್ತಿ, ವೆಂಕಟಾಚಲ ಶಾಸ್ತ್ರಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಬಿ.ಎ.ವಿವೇಕ್ ರೈ, ಗಿರಡ್ಡಿ ಗೋವಿಂದರಾಜು, ಸಿ.ಎನ್.ರಾಮಚಂದ್ರನ್, ಡಾ.ಎಂ.ಎಂ. ಕಲಬುರ್ಗಿ, ಮಧು ಕೀಶ್ವರ್, ಶೋಭಾ ಡೇ, ಶಶಿ ದೇಶಪಾಂಡೆ, ಪ್ರಸೂನ್ ಜೋಷಿ, ನೀಲಾಂಜನ್ ರಾಯ್ ಸೇರಿದಂತೆ 100ಕ್ಕೂ ಹೆಚ್ಚಿನ ಲೇಖಕರು ಭಾಗವಹಿಸುವರು.
ಮೂರು ದಿನವೂ ಕಾರ್ಯಕ್ರಮ ಬೆಳಿಗ್ಗೆ 10ರಿಂದ ಆರಂಭವಾಗಲಿದೆ’ ಎಂದು ಲೇಖಕ ವಿಕ್ರಮ್ ಸಂಪತ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೊದಲ ವರ್ಷದಲ್ಲಿಯೇ ದೇಶದ ಓದುಗರು ಹಾಗೂ ಬರಹಗಾರರು ಭಾಗವಹಿಸಲೇಬೇಕಾದ ಉತ್ಸವವಾಗಿ ಬೆಳೆದಿದೆ. ಜೊತೆಗೆ ಸಮೃದ್ಧ ಚಿಂತನೆಗೆ ಒಳಪಡಿಸುವ ಚರ್ಚೆಗಳು, ಸಂದರ್ಶನಗಳು ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಲೇಖಕರೊಂದಿಗೆ ಪ್ರೇಕ್ಷಕರು ಸಂವಾದ ನಡೆಸಬಹುದು.
ನೂರು ವರ್ಷಗಳ ಭಾರತೀಯ ಸಿನಿಮಾದ ಸಂಸ್ಮರಣೆ ಕಾರ್ಯಕ್ರಮವನ್ನೂ ನಡೆಸಲಾಗುವುದು. ನಟ ಫರ್ಹಾನ್ ಅಖ್ತರ್, ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ತಾ, ಬರಹಗಾರ ಪ್ರಸೂನ್ ಜೋಷಿ ಚರ್ಚೆಯಲ್ಲಿ ಭಾಗವಹಿಸುವರು’ ಎಂದು ಅವರು ವಿವರ ನೀಡಿದರು.
ಸಿನಿಮಾ ಲೇಖನದ ಕ್ಷೇತ್ರದ ಚರ್ಚೆಗಳಲ್ಲಿ ಭಾರದ್ವಾಜ್ ರಂಗನ್, ಸಿದ್ದಾರ್ಥ ಭಾಟಿಯಾ, ಶರ್ಮಿಸ್ತಾ ಗೋಪು, ಎಂ.ಕೆ. ರಾಘವೇಂದ್ರ, ಕಿಶ್ವರ್ ದೇಸಾಯಿ, ಭಾವನಾ ಸೋಮಯ್ಯ, ಜಯಂತ್ ಕಾಯ್ಕಿಣಿ ಮತ್ತಿತರರು ಭಾಗವಹಿಸುವರು. ಕವಿ ಗುಲ್ಜಾರ್ ಅವರು ಈ ವರ್ಷ ಕೂಡಾ ಪ್ರಸೂನ್ ಜೋಷಿ ಅವರೊಂದಿಗೆ ಸಿನಿಮಾ ಸಾಹಿತ್ಯ ಕುರಿತ ಚರ್ಚೆಯಲ್ಲಿ ಭಾಗವಹಿಸುವರು ಎಂದರು.
‘ಕಾರ್ಯಕ್ರಮಕ್ಕೆ ಗೋಥೆ ಇನ್ಸ್ಟಿಟ್ಯೂಟ್ ಸಹಯೋಗ ಇದ್ದು, ಈ ಆವೃತ್ತಿಯಲ್ಲಿ ಜರ್ಮನಿಯನ್ನು ಕೇಂದ್ರೀಕರಿಸಿದ ದೇಶವನ್ನಾಗಿ ಆರಿಸಿಕೊಳ್ಳಲಾಗಿದೆ. ಜರ್ಮನಿಯ ಸ್ಲ್ಯಾಮ್ ಪೊಯೆಟ್ ಬಾಸ್ ಬೋಚರ್, ಟಿಲ್ಮನ್ ರಾ್ಯಮ್ಸ್ಟೆಟ್, ಕ್ರಿಸ್ಟೋಫರ್ ಕ್ಲೋಬೆಲ್, ಸಾಸ್ಕಿಯಾ ಜೈನ್, ಅಬ್ಬಾಸ್ ಕೈದರ್ ಪಾಲ್ಗೊಳ್ಳುವರು’ ಎಂದು ಹೇಳಿದರು.
ರಾಜ್ಯದ ಉಪಭಾಷೆಗಳಾದ ಕೊಡವ, ತುಳು, ಬ್ಯಾರಿ ಹಾಗೂ ಕೊಂಕಣಿಗಳ ನಡುವೆ ಮತ್ತು ಸಂಸ್ಕೃತವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬಳಸಿರುವ ಮತ್ತೂರು ಹಳ್ಳಿಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧ್ಯಾತ್ಮ ಹಾಗೂ ಬರಹ ಕುರಿತು ಶ್ರೀ ಶ್ರೀ ರವಿಶಂಕರ್ ಗುರೂಜಿ ವಿಶೇಷ ಕಾರ್ಯಕ್ರಮ ನೀಡುವರು. ಸಂಜೆ ವೇಳೆ ಕರ್ನಾಟಕ ವೈಭವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಉತ್ಸವಕ್ಕೆ ರಾಷ್ಟ್ರೀಯ ಸಾಹಿತ್ಯ ಅಕಾಡೆಮಿ, ಭಾರತದ ರಾಷ್ಟ್ರೀಯ ಅಕ್ಷರ ಅಕಾಡೆಮಿ ಬೆಂಬಲ ನೀಡಿದ್ದು, ಗಣ್ಯ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಲೇಖಕರನ್ನು ಒಂದುಗೂಡಿಸಲಾಗುತ್ತಿದೆ. ಒಡಿಯಾದ ರಮಾಕಾಂತ ರಥ, ಬಂಗಾಲದನ ನವನೀತ್ ದೇವ್ ಸೇನ್, ತಮಿಳಿನ ಅಶೋಕ್ ಮಿತ್ರನ್, ಹಿಂದಿಯ ಅಶೋಕ್ ವಾಜಪೇಯಿ, ಗೋವಿಂದ ಮಿಶ್ರಾ, ಮಲಯಾಳಂನ ಸಚ್ಚಿದಾನಂದನ್, ತೆಲುಗುವಿನ ವೇಮ್ಪಳ್ಳಿ ಗಂಗಾಧರ, ಕಾಶ್ಮೀರದ ಫಾರೂಕ್ ಶಾಹಿನ್, ಮರಾಠಿಯ ಧರ್ಮಕೀರ್ತಿ ಸುಮಂತ್, ಅಸ್ಸಾಮಿ ಭಾಷೆಯ ಅರಿಂಧಮ್ ಬೋರ್ಕಾಟಾಕಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಎಲ್ಲರಿಗೂ ಮುಕ್ತ ಪ್ರವೇಶ ಇದ್ದು, ವೆಬ್ಸೈಟ್ www.bangaloreliteraturefestival.org ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ, ಭಾಗವಹಿಸುವ ಲೇಖಕರ ವಿವರ ಹಾಗೂ ಇತರ ಮಾಹಿತಿ ಕೂಡಾ ವೆಬ್ಸೈಟ್ನಲ್ಲಿ ಲಭ್ಯ ಇರುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.