ಬೆಂಗಳೂರು: ನಗರದ `ಪುಸ್ತಕಮನೆ' ಪ್ರತಿಷ್ಠಾನದ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ 108ನೇ ಹುಟ್ಟುಹಬ್ಬದ ಆಚರಣೆ ವಿಶಿಷ್ಟ ರೀತಿಯಲ್ಲಿ ನಗರದ ಕನಕಪುರ ರಸ್ತೆಯ ಓಜಾಪುರಿ ಬಡಾವಣೆಯ ಪುಸ್ತಕಮನೆ ಪ್ರತಿಷ್ಠಾನದಲ್ಲಿ ಇದೇ 29ರಂದು ಬೆಳಿಗ್ಗೆ 8ರಿಂದ ರಾತ್ರಿ 8 ರವರೆಗೆ ನಡೆಯಲಿದೆ.
ಈ ಸಂದರ್ಭದಲ್ಲಿ ಕುವೆಂಪು ಅವರ ಸಮಗ್ರ ಪುಸ್ತಕಗಳ ಪ್ರದರ್ಶನವನ್ನು ಆಯೋಜಿಸಲಾಗುವುದು.
ಮೊದಲ ಬಾರಿಗೆ ಕುವೆಂಪು ಅವರ ಸಾಹಿತ್ಯವನ್ನು ಓದಲು ಸಾಹಿತ್ಯಾಸಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯವನ್ನು ಓದಬಹುದು.
ಪ್ರದರ್ಶನವನ್ನು ಕವಿ ಜರಗನಹಳ್ಳಿ ಶಿವಶಂಕರ್ ಹಾಗೂ `ಸಾಹಿತ್ಯ ಓದು' ಕಾರ್ಯಕ್ರಮವನ್ನು ಕಲಾವಿದ ಎಂ.ಎಸ್. ಮೂರ್ತಿ ಅವರು ಉದ್ಘಾಟಿಸುವರು. ಕಲಾಪೋಷಕ ಸೋಮಶೇಖರ್ ಅಧ್ಯಕ್ಷತೆ ವಹಿಸುವರು ಎಂದು `ಪುಸ್ತಕಮನೆ' ಹರಿಹರಪ್ರಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.