ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಪಂಚಮಸಾಲಿ ಸಮಾಜವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವ ಜೊತೆಗೆ, ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ಆಗ್ರಹಿಸಿದರು.
ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿರುವ ನಿವೇಶನದಲ್ಲಿ ಪಂಚಮಸಾಲಿ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಪಂಚಮಸಾಲಿ 4ನೇ ಜಿಲ್ಲಾ ಸಮಾವೇಶದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ವಿಧಾನಸಭಾ ಕ್ಷೇತ್ರಗಳ ಪೈಕಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮಾಜದ ಬೆಂಬಲದಿಂದಲೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಆದ್ದರಿಂದ ಪಂಚಮಸಾಲಿ ಸಮಾಜವನ್ನು ಕಡೆಗಣಿಸ ಬಾರದು ಎಂದರು.
ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಮಾವೇಶ ಉದ್ಘಾಟಿಸಿದರು. ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪಂಚಮಸಾಲಿ ಜಗದ್ಗುರು ಪೀಠದ ಚರಪೀಠಾಧಿಪತಿ (ಹರಿಹರ) ಸಿದ್ಧಲಿಂಗ ಸ್ವಾಮೀಜಿ, ಸ್ಥಿರಪೀಠಾಧಿಪತಿ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಾವಿ ಬೆಟ್ಟಪ್ಪ, ಸಂಸದೆ ಜೆ.ಶಾಂತಾ, ಶಾಸಕರಾದ ನೇಮರಾಜ ನಾಯ್ಕ ಹಾಗೂ ಕರುಣಾಕರ ರೆಡ್ಡಿ ಪಾಲ್ಗೊಂಡಿದ್ದರು.
ಸಮುದಾಯ ಭವನ, ಹರ ದೇವಸ್ಥಾನ, ಆಡಳಿತ ಕಚೇರಿ, ನೌಕರರ ಭವನ, ಪಂಚಮಸಾಲಿ ಬ್ಯಾಂಕ್, ಅನಾಥ ಮಕ್ಕಳ ವಸತಿನಿಲಯ ಮತ್ತು ನೀರಿನ ಟ್ಯಾಂಕ್ ಕಟ್ಟಡಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.