ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ನ್ಯಾಯಾಲಯದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಾಪಸ್ ಪಡೆಯಲು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಗುರುವಾರ ಅನುಮತಿ ನೀಡಿದೆ.
ಅರ್ಜಿ ವಾಪಸ್ ಪಡೆಯಲು ಅವಕಾಶ ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ಕೋರ್ಟ್ಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದರು.ಆದರೆ ಪುನರ್ ಪರಿಶೀಲನಾ ಅರ್ಜಿ ವಾಪಸ್ ಪಡೆಯುವ ತನ್ನ ನಿರ್ಧಾರವನ್ನು ಸಂಬಂಧಪಟ್ಟವರಿಗೆ ಪತ್ರದ ಮೂಲಕ ತಿಳಿಸಿದ್ದಕ್ಕೆ ಕೇಂದ್ರವು ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಯಿತು.
ವಸ್ತುಸ್ಥಿತಿ ವರದಿ: 2ಜಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ಗುರುವಾರ ಸುಪ್ರೀಂಕೋರ್ಟ್ಗೆ ವಸ್ತುಸ್ಥಿತಿ ವರದಿಗಳನ್ನು ಸಲ್ಲಿಸಿವೆ. ಜುಲೈ 17ರಂದು ಈ ಸಂಬಂಧ ವಿಚಾರಣೆ ನಡೆಯಲಿದೆ.
ದೂರಸಂಪರ್ಕ ಖಾತೆ ಮಾಜಿ ಸಚಿವ ದಯಾನಿಧಿ ಮಾರನ್ ಭಾಗಿಯಾದ ಏರ್ಸೆಲ್- ಮ್ಯಾಕ್ಸಿಸ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರಿಗೆ ದಾಖಲೆ ಸಲ್ಲಿಸಲೂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.