ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಎ.ಪಿ. ಸಿಂಗ್, ಕೇಂದ್ರ ಜಾಗೃತ ದಳದ ಆಯುಕ್ತ ಪ್ರದೀಪ್ ಕುಮಾರ್ ಅವರನ್ನು ಮಂಗಳವಾರ ಭೇಟಿಯಾಗಿ ತನಿಖಾ ಪ್ರಕ್ರಿಯೆಯ ವಿವರ ನೀಡಿದರು.
ತನಿಖೆಯಲ್ಲಿ ನಡೆದ ಪ್ರಗತಿ, ತನಿಖೆಯ ವಿವಿಧ ಆಯಾಮಗಳು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಿಗೆ ಕಳುಹಿಸಿದ ಪತ್ರಗಳ ವಿವರ ಎಲ್ಲದರ ಮಾಹಿತಿಯನ್ನೂ ಸಿಬಿಐ ಮುಖ್ಯಸ್ಥರು ಜಾಗೃತ ದಳದ ಆಯುಕ್ತರಿಗೆ ನೀಡಿದರು ಎನ್ನಲಾಗಿದೆ.
ಸ್ಪೆಕ್ಟ್ರಂ ಹಗರಣದಲ್ಲಿ ಸಿಬಿಐ ನಡೆಸುತ್ತಿರುವ ತನಿಖೆಯ ನಿಗಾ ವಹಿಸುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಸಿವಿಸಿಗೆ ಆದೇಶಿಸಿತ್ತು. ಪ್ರತಿ 15 ದಿನಗಳಿಗೊಮ್ಮೆ ಸಿಬಿಐ ಅಧಿಕಾರಿಗಳ ಜತೆ ಸಭೆ ನಡೆಸಲು ಸಿವಿಸಿ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನೇಮಿಸುವಂತೆ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿತ್ತು. ತನಿಖೆಯಲ್ಲಾದ ಪ್ರಗತಿಯ ವರದಿಯನ್ನು ಕಾಲಕಾಲಕ್ಕೆ ಸಿವಿಸಿಗೆ ಸಲ್ಲಿಸುವಂತೆ ನ್ಯಾಯಪೀಠ ಸಿಬಿಐಗೆ ಸೂಚಿಸಿತ್ತು.