ನವದೆಹಲಿ (ಪಿಟಿಐ) : 2ಜಿ ಸ್ಪೆಕ್ಟ್ರಂ ಹಂಚಿಕೆಯ 122 ಪರವಾನಿಗಿಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ನಂತರ ಹೊಸ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಮತ್ತು ಪರವಾನಿಗಿ ಪಡೆಯಲು ವಿಫಲವಾಗಿರುವ ಟೆಲಿಕಾಂ ಕಂಪೆನಿಗಳು ತಕ್ಷಣದಿಂದ ತಮ್ಮ ಸೇವೆ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ.
ನವೆಂಬರ್ 12 ಮತ್ತು 14ರಂದು ನಡೆದ ಹೊಸ ಹರಾಜು ಪ್ರಕ್ರಿಯೆಯಲ್ಲಿ ಪರವಾನಿಗಿ ಪಡೆಯಲು ಯಶಸ್ವಿಯಾಗಿರುವ ಕಂಪೆನಿಗಳು ತಕ್ಷಣದಿಂದಲೇ ಆಯಾ ವಲಯಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ಈ ಮೊದಲು ಫೆ. 2. 2012ರ ತನ್ನ ತೀರ್ಪಿನಂತೆ ಪರವಾನಿಗಿ ರದ್ದಾದ ಬಳಿಕ ಯಾವ ಕಂಪೆನಿಗಳಿಗೆ ಕೆಲಸ ಮುಂದವರಿಸಲು ಅವಕಾಶ ನೀಡಲಾಗಿದೆಯೊ ಅಂತಹ ಕಂಪೆನಿಗಳು ಪರವಾನಿಗಿ ಪಡೆಯಲು ಹೊಸ ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ನಿಗದಿಪಡಿಸಿರುವ ದರವನ್ನು ಕಟ್ಟುವಂತೆ ಜಿ. ಎಸ್. ಸಿಂಘ್ವಿ ಮತ್ತು ಕೆ. ಎಸ್. ರಾಧಾಕೃಷ್ಣ ಅವರನ್ನೊಳಗೊಂಡ ನ್ಯಾಯ ಪೀಠವು ಸೂಚಿಸಿತ್ತು.
ಭಾರ್ತಿ ಏರ್ಟೆಲ್, ವೊಡಾಫೋನ್, ಟೆಲೆನರ್ ಪ್ರಾಮ್ಟೆಡ್ ಟೆಲೆವಿಂಗ್, ವೀಡಿಯೋಕಾನ್ ಮತ್ತು ಐಡಿಯಾ ಸೆಲ್ಯೂಲರ್ನ ನಿರ್ವಾಹಕರು ನವೆಂಬರ್ನಲ್ಲಿ ನಡೆಯಲಿರುವ ಹೊಸ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ಅರ್ಜಿ ಸಲ್ಲಿಸಿದ್ದರು. ಸತ್ಯಂ ಟೆಲಿ ಸರ್ವೀಸಸ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.
ಹರಾಜಿನಲ್ಲಿ ವೀಡಿಯೋಕಾನ್6 ವಲಯಗಳಲ್ಲಿ, ಐಡಿಯಾ 8 ವಲಯಗಳಲ್ಲಿ ಹಾಗೂ ಟೆಲೆನರ್ 6 ವಲಯಗಳಲ್ಲಿ ಪರವಾನಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದವು.