ಚಾಮರಾಜನಗರ: ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಪಟ್ಟಿ ಮಾಡಿಕೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ನಿಯೋಜಿಸುವ ಎರಡನೇ ಹಂತದ ರ್ಯಾಂಡಮೈಜೇಷನ್ (ಯಾದೃಚ್ಛಿಕ ಅಥವಾ ಸಮಾನಾವಕಾಶ) ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಎನ್ಐಸಿ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ರ್ಯಾಂಡಮೈಜೇಷನ್ ಆಯ್ಕೆ ಪ್ರಕ್ರಿಯೆ ನಡೆಯಿತು.
ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ನಿಗದಿ ಮಾಡಲಾಯಿತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾವ ಚುನಾವಣಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕೆಂಬ ವಿವರವನ್ನು ಮಾತ್ರವೇ ಅಂತಿಮಗೊಳಿಸಲಾಯಿತು. ಆದರೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಯಾವ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಮಸ್ಟರಿಂಗ್ ದಿನ ಅಥವಾ ಅದರ ಹಿಂದಿನ ದಿನದಂದು 3ನೇ ಹಂತದ ರ್ಯಾಂಡಮೈಜೇಷನ್ ಆಯ್ಕೆ ಪ್ರಕ್ರಿಯೆ ಮೂಲಕ ನಿಗದಿ ಮಾಡಲಾಗುತ್ತದೆ.
ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರು ಹಾಜರಿದ್ದ ವೀಕ್ಷಕರಿಗೆ ಚುನಾವಣೆಗೆ ನೇಮಕವಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುರಿತು ಮಾಹಿತಿ ನೀಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಎಚ್.ಎನ್. ಪಾಟೀಲ್, ಹನೂರು ವಿಧಾನಸಭಾ ಕ್ಷೇತ್ರದ ವೀಕ್ಷಕ ವಿ. ರಾಂ ವಿಶಾಲ್ ಮಿಶ್ರಾ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕ ಪಿ.ಎನ್.ಬಿ.ಶರ್ಮ, ಪೊಲೀಸ್ ವೀಕ್ಷಕ ಲಖ್ಖನ್ ಲಾಲ್, ವೆಚ್ಚ ವೀಕ್ಷಕರಾದ ಧರ್ಮೇಂದ್ರಕುಮಾರ್, ಪಂಕಜ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಜಿಲ್ಲಾ ಮಾಸ್ಟರ್ ಟ್ರೈನರ್ ಸೋಮಸುಂದರ್, ಯತಿರಾಜು ಹಾಜರಿದ್ದರು.