ಮೈಸೂರು: `ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಾರ್ಚ್ 3 ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಜಿಲ್ಲೆ ಸರ್ಕಾರಿ ಸವಲತ್ತುಗಳ ಸಂತೆ ನಡೆಯಲಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಬುಧವಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಸಂತೆಯಲ್ಲಿ 23 ಇಲಾಖೆಗಳಿಂದ 2011-12 ನೇ ಸಾಲಿನಲ್ಲಿ 64,785 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಚಾಲನೆ ನೀಡಲಿದ್ದಾರೆ. ಸರ್ಕಾರದ ಸವಲತ್ತುಗಳು ಫಲಾನುಭವಿಗಳಿಗೆ ನೇರವಾಗಿ ತಲುಪಿಸಬೇಕು ಎನ್ನುವ ಉದ್ದೇಶದಿಂದ ಇಂತಹ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಸಂತೆಯಲ್ಲಿ ಪ್ರತಿ ಇಲಾಖೆಗೂ ಒಂದೊಂದು ಮಳಿಗೆಯನ್ನು ನೀಡಲಾಗುತ್ತಿದೆ ಎಂದರು.
ವಿಮುಕ್ತೆ ಯೋಜನೆ ಜಾರಿ: `ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ 45 ವರ್ಷ ತುಂಬಿರುವ ಅವಿವಾಹಿತ ಮಹಿಳೆಯರಿಗೆ ಮಾಸಾಶನ ನೀಡುವ ವಿಮುಕ್ತೆ ಯೋಜನೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 3010 ಮಹಿಳೆಯರನ್ನು ಗುರುತಿಸಲಾಗಿದ್ದು, ಇವವರು ಪ್ರತಿ ತಿಂಗಳು ಸಾವಿರ ರೂ.ಗಳನ್ನು ಪಡೆಯಲಿದ್ದಾರೆ ಎಂದರು.