ಬೆಂಗಳೂರು: ರಾಜ್ಯದಲ್ಲಿ ವಾರಸುದಾರರು ಇಲ್ಲದ 28ರಿಂದ 30 ಲಕ್ಷ ಅಡುಗೆ ಅನಿಲ ಸಂಪರ್ಕಗಳು ಪತ್ತೆಯಾಗಿವೆ. ಅಂತಹ ಸಂಪರ್ಕಗಳ ಪಟ್ಟಿಯನ್ನು ವಾರದ ಒಳಗೆ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ತಿಳಿಸಿದರು.
ಒಟ್ಟು 76 ಲಕ್ಷ ಅಡುಗೆ ಅನಿಲ ಸಂಪರ್ಕಗಳಿವೆ. ಒಂದೇ ಆರ್.ಆರ್ ಸಂಖ್ಯೆಯನ್ನು ನೀಡಿ 2-3 ಅಡುಗೆ ಅನಿಲ ಸಂಪರ್ಕಗಳನ್ನು ಪಡೆದಿರುವವರ ಸಂಖ್ಯೆ ಹತ್ತು ಲಕ್ಷದಷ್ಟಿದೆ. ಇದುವರೆಗೆ ಆರ್.ಆರ್.ಸಂಖ್ಯೆಯನ್ನೇ ನೀಡದವರ ಸಂಖ್ಯೆ ಸುಮಾರು 30 ಲಕ್ಷದಷ್ಟು. ಅವನ್ನು ವಾರಸುದಾರರು ಇಲ್ಲದ ಸಂಪರ್ಕಗಳು ಎಂದು ಪರಿಗಣಿಸಿದ್ದೇವೆ.
ಒಂದು ವೇಳೆ ವಾರಸುದಾರರು ಇದ್ದರೆ ಪಟ್ಟಿ ಪ್ರಕಟಿಸಿದ ನಂತರ ಆರ್.ಆರ್.ಸಂಖ್ಯೆಯೊಂದಿಗೆ ಮಾಹಿತಿ ನೀಡಬಹುದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಮೂರರಿಂದ ನಾಲ್ಕು ಲಕ್ಷ ಜನ ಅಡುಗೆ ಅನಿಲ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಕಲಿ ಸಂಪರ್ಕಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಹೊಸದಾಗಿ ಸಂಪರ್ಕಗಳನ್ನು ಕಲ್ಪಿಸಲಾಗುವುದು.
ಸದ್ಯಕ್ಕೆ ಯಾರಿಗೂ ಅಡುಗೆ ಅನಿಲ ಪೂರೈಕೆಯನ್ನು ನಿಲ್ಲಿಸಿಲ್ಲ. ಒಂದೇ ಕುಟುಂಬದವರು 2-3 ಸಂಪರ್ಕಗಳನ್ನು ಹೊಂದಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ಒಂದು, ಎಂಟು ಜನರಿದ್ದರೆ ಎರಡು ಸಂಪರ್ಕಗಳು ಬೇಕಾಗುತ್ತವೆ. ಅಂತಹವರಿಗೆ ತೊಂದರೆ ಕೊಡುವುದಿಲ್ಲ ಎಂದರು.
ಪಡಿತರ ಚೀಟಿಗಳನ್ನು ಹೊಂದಿಲ್ಲದೆ ಇರುವ ಕುಟುಂಬಗಳ ಸಂಖ್ಯೆ ಸುಮಾರು ಹತ್ತು ಲಕ್ಷದಷ್ಟಿದೆ. ಅವರಿಗೆ ಕಾರ್ಡ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.