ಚಿಂಚೋಳಿ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ನಿಜಾಮರ ಕಾಲದ ಚಿಂಚೋಳಿ ತಾಲ್ಲೂಕಿನ ಶಾದಿಪುರ ಕೆರೆಯ ಕಾಯಕಲ್ಪದ ಹೆಸರಿನಲ್ಲಿ ರೂ.30 ಲಕ್ಷ ಖರ್ಚು ಮಾಡಿದ್ದರೂ ಕೆರೆಯ ನೀರು ವ್ಯರ್ಥವಾಗಿ ಹರಿಯುತ್ತಿರುವುದು ನಿಂತಿಲ್ಲ.
ಕಳೆದ 2010-11ರಲ್ಲಿ, ಪಂಚಾಯತ ರಾಜ್ ಇಲಾಖೆಯ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಯ ಲೆಕ್ಕಶೀರ್ಷಿಕೆ 4702 ಅಡಿಯಲ್ಲಿ, ಈ ಶಾದಿಪುರ ಕೆರೆಯ ಬಂಡ್(ಕೆರೆಯ ಏರಿ)ನ ಬಲವರ್ಧನೆ, ಬಂಡ್ಗೆ ಪಿಚ್ಚಿಂಗ್ ಹಾಗೂ ವೆಸ್ಟ್ವೆಯರ್ ದುರಸ್ತಿ ಮತ್ತು ಕೆರೆಯ ಹೂಳು ತೆಗೆಯುವುದಕ್ಕಾಗಿ ರೂ. 30 ಲಕ್ಷ ಖರ್ಚು ಮಾಡಲಾಗಿದೆ.
ಕೆರೆಯ ಮುಳುಗಡೆ ಪ್ರದೇಶ ಸುಮಾರು 28 ಎಕರೆ ಎಂಬುದು ರೈತರ ಹೇಳಿಕೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ರೈತರು ಪರಿಹಾರದ ಮೊದಲ ಕಂತನ್ನು ಸರ್ಕಾರದಿಂದ ಪಡೆದಿದ್ದು, ಎರಡನೇ ಕಂತಿಗಾಗಿ ಕಾಯುತ್ತಿದ್ದಾರೆ.
ಕೆರೆಯಲ್ಲಿ ಹೆಚ್ಚು ನೀರು ನಿಂತರೆ ಪ್ರಭಾವಿ ವ್ಯಕ್ತಿಗಳ ಹೊಲಗಳಲ್ಲಿ ನೀರು ನ್ಲ್ಲಿಲುತ್ತದೆ. ಅಂಥವರ ಒತ್ತಡಕ್ಕೆ ಮಣಿದ ಅಧಿಕಾರಿಗಳು, ಅವರ ಹೊಲಗಳು ಮುಳುಗಬಾರದು. ಕೆರೆಯಲ್ಲಿ ನೀರೂ ನಿಲ್ಲಬಾರದು, ಆದರೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬಂತೆ ಬೊಕ್ಕಸದ ಹಣ ಖರ್ಚು ಇಲ್ಲಿ ಮಾಡ್ದ್ದಿದಾರೆಂದು ಅನಾಮಿಕರಾಗಿ ಉಳಿಯಬಯಸುವ ಗ್ರಾಮಸ್ಥರು ದೂರುತ್ತಾರೆ.
ವೆಸ್ಟ್ವೆಯರ್ನ ದುರಸ್ತಿ ಕಾಮಗಾರಿಯಲ್ಲಿ ಹಳೆಯ ವೇಸ್ಟ್ವೆಯರ್ನ ಮಟ್ಟ ಕಾಪಾಡಲು ಸಿಮೆಂಟ್ ಕೂಪಿಂಗ್ ಹಾಕಿದ್ದು, 25 ಅಡಿ ಅಗಲದ ವೆಸ್ಟ್ವೆಯರ್ಗೆ 4 ಅಡಿ ಕೂಪಿಂಗ್ ಹಾಕದೇ ಬಿಟ್ಟಿದ್ದಾರೆ. ಇದರಿಂದ ಕೆರೆಯ ನೀರು ನಿರಂತರ ಹರಿಯುತ್ತಾ ನದಿ ಪಾಲಾಗುತ್ತಿದೆ.
ಉಳಿದ 4 ಅಡಿಗೂ ಕೂಪಿಂಗ್ ಹಾಕಿದ್ದರೆ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಲ್ಲುತ್ತಿತ್ತು.
ಈ ಹಿಂದೆ ಸಣ್ಣ ನೀರಾವರಿ ಇಲಾಖೆ ಆಧೀನದಲ್ಲಿದ್ದ ಈ ಕೆರೆಯನ್ನು 2 ವರ್ಷಗಳ ಹಿಂದೆಯಷ್ಟೇ ಪಂಚಾಯತ ರಾಜ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ಇದುವರೆಗೂ ಯಾವುದೇ ದಾಖಲಾತಿಗಳನ್ನು ನೀಡಿಲ್ಲ ಎನ್ನಲಾಗುತ್ತಿದೆ.
ಪರಿಸ್ಥಿತಿ ಹೀಗಿದ್ದರೂ ಪಂಚಾಯತ ರಾಜ್ ಇಲಾಖೆ ನಡೆಸಿದ ಪ್ರಯೋಜನಕ್ಕೆ ಬಾರದ ಶಾದಿಪುರ ಕೆರೆಯ `ಕೆರೆ ಕಾಯಕಲ್ಪ~ದ ಕಾಮಗಾರಿ ಚರ್ಚೆಗೆ ಗ್ರಾಸವೊದಗಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.