ರಾಮನಗರ: `ರಾಸಲೀಲೆ~ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯನ್ನು ವಿವಿಧ ಬಗೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸಿಐಡಿ ಮುಂದಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ 30ರಂದು ಸ್ವಾಮೀಜಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕೆಂದು ಸಿಐಡಿ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.
ಸ್ವಾಮೀಜಿಗೆ ಒಟ್ಟು 9 ಬಗೆಯ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ. ರಕ್ತ ಪರೀಕ್ಷೆ, ಲೈಂಗಿಕ ಸಾಮರ್ಥ್ಯ, ವೀರ್ಯಾಣು, ನರ, ಮೂಳೆ, ಥೈರಾಯಿಡ್ ಸೇರಿದಂತೆ ಇತರ ಬಗೆಯ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಸ್ವಾಮೀಜಿಯ ದೈಹಿಕ ಪರೀಕ್ಷೆ ನಡೆಸಲೆಂದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಮಿತಿ ರಚಿಸಲಾಗಿದ್ದು, ಸಮಿತಿಯ ಸದಸ್ಯರ ಉಸ್ತುವಾರಿಯಲ್ಲಿ ಈ ಎಲ್ಲಾ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ಹೇಳಿವೆ.
ಸಿಐಡಿ ಈ ಹಿಂದೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಸ್ವಾಮೀಜಿ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಮುಂದಾಗಿರಲಿಲ್ಲ. ಈ ವಿಷಯವನ್ನು ಸಿಐಡಿ ಅಧಿಕಾರಿಗಳು ರಾಮನಗರದ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಕುರಿತಂತೆ ನ್ಯಾಯಾಧೀಶರು ದೈಹಿಕ ಪರೀಕ್ಷೆಗೆ ಸಹಕರಿಸುವಂತೆ ಸ್ವಾಮೀಜಿಗೆ ಸೂಚಿಸಿದ್ದರು.
ಅಲ್ಲದೆ ಅಗತ್ಯ ಪರೀಕ್ಷೆಗೆ ಅವರನ್ನು ಒಳಪಡಿಸುವಂತೆ ಕ್ರಮ ಕೈಗೊಳ್ಳಲು ಸಿಐಡಿಗೂ ಅನುಮತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿಐಡಿ ಕಡೆಯಿಂದ ಸ್ವಾಮೀಜಿಗೆ ಮತ್ತೊಂದು ನೋಟಿಸ್ ಜಾರಿಯಾಗಿದ್ದು, ಇದೇ 30ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.