ದೇವನಹಳ್ಳಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ `ಎಂ.ಎಸ್ ರಾಮಯ್ಯ ಎಸ್ಟೇಟ್~ ವತಿಯಿಂದ ಒತ್ತುವರಿ ಮಾಡಿಕೊಳ್ಳಲಾಗಿದ್ದ 37 ಎಕರೆ ಭೂಮಿಯನ್ನು ಗುರುವಾರ ಸರ್ಕಾರ ವಶಕ್ಕೆ ತೆಗೆದುಕೊಂಡಿದೆ.
ವಿಮಾನ ನಿಲ್ದಾಣಕ್ಕೆ ಅಂಟಿಕೊಂಡಂತಿರುವ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಜೋಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಈ ಒತ್ತುವರಿಯ ಜಮೀನಿನ ಮೌಲ್ಯ ಸುಮಾರು ರೂ 185 ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಅಕ್ಲೇನಹಳ್ಳಿ-ಮಲ್ಲೇನಹಳ್ಳಿ ಜೋಡಿ ಗ್ರಾಮದ ಸರ್ವೇ ನಂ 4, 31, 26, 18 ರಲ್ಲಿನ 400ಕ್ಕೂ ಹೆಚ್ಚು ಎಕರೆ ಜಮೀನು `ಎಂ.ಎಸ್ ರಾಮಯ್ಯ ಎಸ್ಟೇಟ್~ ಹೆಸರಿನಲ್ಲಿದೆ. ಇದೇ ಪ್ರದೇಶದಲ್ಲಿ 37 ಎಕರೆ ಜಮೀನನ್ನು ಎಸ್ಟೇಟ್ ಅತಿಕ್ರಮಣ ಮಾಡಿದೆ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಈ ಹಿಂದೆಯೇ ದೂರು ನೀಡಿದ್ದರು.
ಈ ದಿಸೆಯಲ್ಲಿ ಸತತ 30 ವರ್ಷಗಳಿಂದಲೂ ಗ್ರಾಮಸ್ಥರು ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಅನೇಕ ಬಾರಿ ನೋಟಿಸ್ ನೀಡಿತ್ತಾದರೂ ಟ್ರಸ್ಟ್ ಅತಿಕ್ರಮಿಸಿದ್ದ ಜಾಗವನ್ನು ತೆರವುಗೊಳಿಸಿರಲಿಲ್ಲ.
ಗುರುವಾರ ಸಂಜೆ ತಹಶೀಲ್ದಾರ್ ಎಲ್.ಸಿ.ನಾಗರಾಜ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಈ ಭೂಮಿಯನ್ನು ವಶಕ್ಕೆ ಪಡೆದರು.
ಒತ್ತುವರಿ ಭೂಮಿಯಲ್ಲಿ ಪ್ರಾಚೀನ ದೇವಾಲಯ, ಸ್ಮಶಾನ, ಅಶ್ವತ್ಥಕಟ್ಟೆ, ಕೆರೆ, ಗುಂಡುತೋಪುಗಳಿವೆ. ಒತ್ತುವರಿ ಮಾಡಿಕೊಂಡಿರುವ ಭೂಮಿ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ 5 ಕೋಟಿ ರೂಪಾಯಿ ಎನ್ನಲಾಗಿದೆ.