ಸುವರ್ಣ ವಿಧಾನಸೌಧ (ಬೆಳಗಾವಿ): ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ 39,018 ಕೋಟಿ ರೂಪಾಯಿ ವರಮಾನ ಸಂಗ್ರಹಿಸಿದೆ. ಇದೇ ಅವಧಿಯಲ್ಲಿ ವಿವಿಧ ಬಾಬ್ತುಗಳಿಗಾಗಿ 38,072 ಕೋಟಿ ರೂಪಾಯಿ ವೆಚ್ಚ ಮಾಡಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಪುಟ್ಟರಂಗ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸೆಪ್ಟೆಂಬರ್ ಅಂತ್ಯದವರೆಗಿನ ವರಮಾನ ಮತ್ತು ವೆಚ್ಚದ ವಿವರ ನೀಡಿದರು. 13 ಆದಾಯ ಮೂಲಗಳಿಂದ ಈ ಅವಧಿಯಲ್ಲಿ ರೂ 39,018 ಕೋಟಿ ವರಮಾನ ಸಂಗ್ರಹವಾಗಿದೆ.
ಇದೇ ಅವಧಿಯಲ್ಲಿ ಯೋಜನಾ ವಲಯದ ಕಾರ್ಯಕ್ರಮಗಳಿಗೆ ರೂ 12,025 ಕೋಟಿ ಮತ್ತು ಯೋಜನೇತರ ಬಾಬ್ತುಗಳಿಗೆ ರೂ 26,047 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು. ಶಿಕ್ಷಣ ಇಲಾಖೆಯಲ್ಲಿ ಅತ್ಯಧಿಕ ವೆಚ್ಚ ಮಾಡಲಾಗಿದೆ. ಯೋಜನಾ ವಲಯದ ಕಾರ್ಯಕ್ರಮಗಳಿಗೆ ರೂ 1,343 ಕೋಟಿ ಮತ್ತು ಯೋಜನೇತರ ಉದ್ದೇಶಗಳಿಗೆ ರೂ 5,656 ಕೋಟಿ ವೆಚ್ಚ ಮಾಡಲಾಗಿದೆ.