ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಟೌನ್‌ಶಿಪ್‌ಗಳಿಗೆ ಸರ್ಕಾರ ತಿಲಾಂಜಲಿ

Last Updated 15 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಸುತ್ತಮುತ್ತ ಸ್ಥಾಪಿಸಲು ಉದ್ದೇಶಿಸಿದ್ದ ಐದು `ಇಂಟಿಗ್ರೇಟೆಡ್ ಟೌನ್‌ಶಿಪ್~ಗಳ (ಉದ್ಯೋಗ ಮತ್ತು ವಸತಿ ಸೌಲಭ್ಯ ಇರುವ ಉಪನಗರ) ಪೈಕಿ ನಾಲ್ಕನ್ನು ಕೈಬಿಡಲು ಗುರುವಾರ ಸಚಿವ ಸಂಪುಟ  ನಿರ್ಧರಿಸಿದೆ.

ಬಿಡದಿ, ಸಾತನೂರು, ನಂದಗುಡಿ, ರಾಮನಗರ ಮತ್ತು ಸೋಲೂರು ಪ್ರದೇಶಗಳಲ್ಲಿ ಟೌನ್‌ಶಿಪ್‌ಗಳನ್ನು ನಿರ್ಮಿಸಲು 2006ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಇವುಗಳಲ್ಲಿ ಬಿಡದಿ ಹೊರತುಪಡಿಸಿ ಉಳಿದ ನಾಲ್ಕು ಕಡೆಯ ಟೌನ್‌ಶಿಪ್ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಲಾಗಿದೆ ಎಂದು ಸಂಪುಟ ತೆಗೆದುಕೊಂಡ ತೀರ್ಮಾನಗಳನ್ನು ಸಚಿವ ಎಸ್. ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಟೌನ್‌ಶಿಪ್ ನಿರ್ಮಾಣ ಯೋಜನೆ ಪ್ರಕಟಿಸಿದ ನಂತರ ಈ ಐದು ಪ್ರದೇಶಗಳಲ್ಲಿ ಭೂ ಉಪಯೋಗ ಬದಲಾವಣೆಗೆ ಅನುಮತಿ ನೀಡುವುದನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಇದರಿಂದ ಭೂ ಮಾಲೀಕರಿಗೂ ಅನನುಕೂಲ ಆಗಿತ್ತು. ಅವರು ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ.
 
ಇತ್ತ ಟೌನ್‌ಶಿಪ್‌ಗಳ ನಿರ್ಮಾಣ ಕಾರ್ಯವೂ ನಿರೀಕ್ಷೆಯಂತೆ ನಡೆಯಲಿಲ್ಲ. ಹೀಗಾಗಿ ಈ ನಿರ್ಬಂಧವನ್ನು ಸಡಿಲಗೊಳಿಸಿ, ಭೂ ಅಭಿವೃದ್ಧಿ ಮತ್ತು ಭೂ ಉಪಯೋಗ ಬದಲಾವಣೆಗೆ ಅನುಮತಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ವಿವರಿಸಿದರು.

ಬಿಡದಿ ಪ್ರದೇಶದಲ್ಲಿ ಮಾತ್ರ ಭೂ ಅಭಿವೃದ್ಧಿ ಮತ್ತು ಭೂ ಉಪಯೋಗ ಬದಲಾವಣೆಗೆ ಸದ್ಯಕ್ಕೆ ಅನುಮತಿ ನೀಡುವುದಿಲ್ಲ. ಅಲ್ಲಿ ಕೆಲ ಯೋಜನೆಗಳು ಅನುಷ್ಠಾನಗೊಂಡಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ಸರ್ಕಾರದ ಈ ತೀರ್ಮಾನದಿಂದ ಈ ನಾಲ್ಕು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ. ವಿವಿಧ ಯೋಜನೆಗಳಿಗೂ ಸರ್ಕಾರದಿಂದ ಅನುಮತಿ ದೊರೆಯಲಿದೆ.

ರಾಜ್ಯಾದ್ಯಂತ ಬಿಪಿಎಲ್ ಗಣತಿ: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಗುರುತಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಆಧಾರಿತ ಗಣತಿಯನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ಪ್ರಸ್ತಾವಕ್ಕೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಇದು ಕೇಂದ್ರ ಸರ್ಕಾರದ ಯೋಜನೆ. ಇದಕ್ಕೆ 105 ಕೋಟಿ ರೂಪಾಯಿ ಖರ್ಚಾಗಲಿದೆ. ಪೂರ್ಣ ಮೊತ್ತವನ್ನು ಕೇಂದ್ರವೇ ಭರಿಸಲಿದೆ ಎಂದು ಸಂಪುಟದ ತೀರ್ಮಾನಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಗಣತಿ ಕಾರ್ಯ ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗಲಿದೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

2004ರಲ್ಲಿ ಕೂಡ ಈ ರೀತಿ ಗಣತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ 67 ಲಕ್ಷ ಗ್ರಾಮೀಣ ಕುಟುಂಬಗಳ ಸಮೀಕ್ಷೆ ನಡೆದಿತ್ತು. ಅದರಲ್ಲಿ 18 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವುದನ್ನು ಗುರುತಿಸಲಾಗಿತ್ತು. ಈ ಬಾರಿಯೂ ಇದೇ ಮಾಹಿತಿಯನ್ನು ಕಲೆಹಾಕಲು ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಗಣತಿಗೆ ಕಂದಾಯ ಇಲಾಖೆ ಮತ್ತು ಅಂಗನವಾಡಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಸಣ್ಣ ಕೈಗಾರಿಕೆಗಳ ಬಡ್ಡಿ ಮನ್ನಾ: ರಾಜ್ಯ ಹಣಕಾಸು ನಿಗಮದಿಂದ ಸಾಲ ಪಡೆದ ಸಣ್ಣ ಕೈಗಾರಿಕೆಗಳ ಮಾಲೀಕರು ಡಿಸೆಂಬರ್ 31ರ ಒಳಗೆ ಅಸಲು ಪಾವತಿಸಿದರೆ, ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಮಾಡಲು ಸಂಪುಟ ನಿರ್ಧರಿಸಿದೆ.

1982ರ ಕೈಗಾರಿಕಾ ನೀತಿ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು 847 ಘಟಕಗಳಿಗೆ ಇದರ ಉಪಯೋಗ ಆಗಲಿದೆ. ಈ ಘಟಕಗಳ ಮಾಲೀಕರು ರೂ 23 ಕೋಟಿ ಸಾಲ ಪಡೆದಿದ್ದರು. ಇದರ ಬಡ್ಡಿ ರೂ 78 ಕೋಟಿ ಮತ್ತು ಸುಸ್ತಿ ಬಡ್ಡಿ ರೂ 4.87 ಕೋಟಿ ಆಗಿದೆ. ಒಟ್ಟು 106.82 ಕೋಟಿ ಬಾಕಿ ಇದ್ದು, ಅಸಲು ಪಾವತಿಸಿದವರಿಗೆ ಏಕಗಂಟು ತೀರುವಳಿ ಯೋಜನೆ ಜಾರಿ ಮಾಡಲಾಗುವುದು ಎಂದು ಸುರೇಶ್‌ಕುಮಾರ್ ವಿವರಿಸಿದರು.
 
2012ರ ಜನವರಿ 1ರಿಂದ ಮಾರ್ಚ್ 31ರ ಒಳಗೆ ಅಸಲು ಪಾವತಿ ಮಾಡುವವರಿಗೆ ಸಾಲದ ಮೇಲಿನ ಶೇ 75ರಷ್ಟು ಬಡ್ಡಿ ಮನ್ನಾ ಮಾಡಲಾಗುವುದು.

ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರು ತಮ್ಮ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವ ತೀರ್ಮಾನ ತೆಗೆದುಕೊಂಡರೆ ಅಂತಹವರಿಗೆ ಅಸಲು ಪಾವತಿಸಲು ಒಂಬತ್ತು ತಿಂಗಳ ಸಮಯ ನೀಡಲಾಗುವುದು ಎಂದೂ ಅವರು ಹೇಳಿದರು.

ಇತರ ಪ್ರಮುಖ ತೀರ್ಮಾನಗಳು:
- 2007-08ನೇ ಸಾಲಿನಲ್ಲಿ ಸ್ಥಾಪಿಸಿದ್ದ ಒಂಬತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಇನ್ನೂ ನಾಲ್ಕು ಕಾಲೇಜುಗಳಿಗೆ ಕಟ್ಟಡ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಈ ಕಾಲೇಜುಗಳನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ವರ್ಗಾಯಿಸಲು ಸಂಪುಟ ಅನುಮೋದನೆ ನೀಡಿದೆ.

ಕಾರವಾರ, ರಾಯಚೂರು, ಹೂವಿನಹಡಗಲಿ ಮತ್ತು ಗಂಗಾವತಿಯಲ್ಲಿನ ಕಾಲೇಜುಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ವ್ಯಾಪ್ತಿಗೆ ವಹಿಸಲಾಗುವುದು. ಈ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡು ಅವಕಾಶಗಳನ್ನು ನೀಡಿದ್ದು, ಮಾತೃ ಇಲಾಖೆ ಅಥವಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಬಹುದಾಗಿದೆ ಎಂದರು.

ಇನ್ನು ಮುಂದೆ ಈ ಕಾಲೇಜುಗಳನ್ನು ವಿ.ಟಿ.ಯು ಕಾಲೇಜ್ ಆಫ್ ಕಾರವಾರ, ರಾಯಚೂರು, ಹೂವಿನಹಡಗಲಿ ಮತ್ತು ಗಂಗಾವತಿ ಎಂದು ಕರೆಯಲಾಗುತ್ತದೆ ಎಂದರು.

- ಗುಲ್ಬರ್ಗದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿಯುವ ನೀರು ಒದಗಿಸುವ ನಾಲ್ಕು ಕೋಟಿ ರೂಪಾಯಿ ವೆಚ್ಚದ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿನಿತ್ಯ ಒಂದು ದಶಲಕ್ಷ ಲೀಟರ್ ನೀರು ಬೇಕಿದೆ. ಈ ನೀರನ್ನು ಮಾಂಜ್ರಾ ನದಿಯಿಂದ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.

- ಕೇಂದ್ರ ಸರ್ಕಾರದ ಸ್ವರ್ಣ ಜಯಂತಿ ಗ್ರಾಮ ರೋಜಗಾರ್ ಯೋಜನೆಯನ್ನು 2012ರ ಜನವರಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆ ಬೆಳಗಾವಿ, ಧಾರವಾಡ, ಗುಲ್ಬರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಯ 20 ತಾಲ್ಲೂಕುಗಳಲ್ಲಿ ಮೊದಲು ಆರಂಭವಾಗಲಿದೆ. ಬಡ ಕುಟುಂಬಗಳಿಗೆ ಲಾಭದಾಯಕ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ.

- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಗಾಗಿ ಸಲಹೆ/ಸಹಕಾರ ನೀಡಲು ಇಂಗ್ಲೆಂಡ್‌ನ `ವಾಟರ್ ಅಂಡ್ ಸ್ಯಾನಿಟೇಷನ್ ಫಾರ್ ದಿ ಪೂರ್~ ಸಂಸ್ಥೆಗೆ ನೀಡಿದ್ದ ಅನುಮೋದನೆಯನ್ನು ರದ್ದು ಮಾಡಲಾಗಿದೆ.

2003ರಲ್ಲೇ ಈ ಸಂಸ್ಥೆಗೆ ಜವಾಬ್ದಾರಿ ವಹಿಸಿದ್ದರೂ ಅದು ತನ್ನ ಕೆಲಸ ಮಾಡಲಿಲ್ಲ. ಹೀಗಾಗಿ ಕೊಟ್ಟಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ. ಈ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆಯಲ್ಲೂ ಇದೇ ರೀತಿಯ ಯೋಜನೆ ಕೈಗೆತ್ತಿಕೊಳ್ಳಲು ಪ್ರಯತ್ನಿಸಿತ್ತು.

ಕೃಷಿ ಯಂತ್ರಗಳಿಗೆ ಸಬ್ಸಿಡಿ ಮಿತಿ ಸಡಿಲ

ಕೃಷಿ ಯಂತ್ರೋಪಕರಣಗಳ ಖರೀದಿಗೆ ನಿಗದಿಪಡಿಸಿದ್ದ ಗರಿಷ್ಠ ರೂ 50 ಸಾವಿರ ಸಬ್ಸಿಡಿ ಹಣದ ಮಿತಿಯನ್ನು ಗುರುವಾರ ರಾಜ್ಯ ಸಚಿವ ಸಂಪುಟ ಸಡಿಲಗೊಳಿಸಿದೆ. ಟ್ರಾಕ್ಟರ್‌ಗಳಿಗೆ ಸಬ್ಸಿಡಿ ನೀಡುವುದನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದೆ.

ರೈತರು ಎಷ್ಟೇ ಮೊತ್ತದ ಕೃಷಿ ಯಂತ್ರೋಪಕರಣ ಖರೀದಿಸಿದರೂ ಇದುವರೆಗೆ ಗರಿಷ್ಠ ರೂ 50 ಸಾವಿರ  ಮಾತ್ರ ಸಬ್ಸಿಡಿ ದೊರೆಯುತ್ತಿತ್ತು. ಇದರಿಂದ ಹೆಚ್ಚು ಬೆಲೆಯ ಯಂತ್ರೋಪಕರಣಗಳನ್ನು ಖರೀದಿ ಮಾಡುವ ರೈತರಿಗೆ ಪ್ರಯೋಜನ ಇರಲಿಲ್ಲ.

ಈಗ ಗರಿಷ್ಠ ಮಿತಿಯನ್ನು ಸಡಿಲ ಮಾಡಿದ್ದು, ಎಷ್ಟು ಪ್ರಮಾಣದ ಸಬ್ಸಿಡಿ ನೀಡಬೇಕು ಎನ್ನುವುದನ್ನು ಕೃಷಿ ಇಲಾಖೆಯೇ ತೀರ್ಮಾನಿಸಲಿದೆ. ಇದಕ್ಕೆ ಹಣಕಾಸು ಇಲಾಖೆ ಅಭಿಪ್ರಾಯ ಪಡೆಯುವ ಅಗತ್ಯವೂ ಇಲ್ಲ ಎಂದು ಗೊತ್ತಾಗಿದೆ.

ಟ್ರಾಕ್ಟರ್‌ಗಳಿಗೆ ಸಬ್ಸಿಡಿ ಸ್ಥಗಿತ ತೀರ್ಮಾನ ಈ ವರ್ಷವೂ ಮುಂದುವರಿಯಲಿದೆ. ಕೃಷಿ ಯಂತ್ರೋಪಕರಣ ಗಳಿಗೆ ನೀಡುವ ಸಬ್ಸಿಡಿಯಲ್ಲಿ ಬಹುತೇಕ ಹಣ ಟ್ರಾಕ್ಟರ್ ಖರೀದಿಗೇ ವ್ಯಯವಾಗುತ್ತಿತ್ತು. ಅದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಸಬ್ಸಿಡಿ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ರೂ 149.12 ಕೋಟಿ ಮೀಸಲಿಟ್ಟಿದ್ದು, ತಕ್ಷಣದಿಂದಲೇ ರೈತರಿಗೆ ಸಬ್ಸಿಡಿ ಹಣ ನೀಡಲು ತೀರ್ಮಾನಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT