ಮೈಸೂರು: `ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಮತ್ತೆ 4.4 ಟಿ.ಎಂ.ಸಿ ನೀರು ಬಿಡಬೇಕು ಎಂದು ಸೂಚಿಸಿದೆ. ಆದರೆ, ವಾಸ್ತವವಾಗಿ ಬಿಳಿಗೊಂಡ್ಲುವಿನಿಂದ ಪ್ರತಿ ನಿತ್ಯ 3 ಸಾವಿರ ಕ್ಯೂಸೆಕ್ನಂತೆ ಈ ತಿಂಗಳ ಅಂತ್ಯಕ್ಕೆ 7.82 ಟಿ.ಎಂ.ಸಿ ನೀರು ತಮಿಳುನಾಡಿಗೆ ಹರಿದು ಹೋಗಲಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕು' ಎಂದು ಕಾವೇರಿ ತಾಂತ್ರಿಕ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
`ಬೆಂಗಳೂರಿಗೆ ಮುಂದಿನ ಜೂನ್ 30ರ ವರೆಗೆ ಪ್ರತಿದಿನ 1500 ಕ್ಯೂಸೆಕ್ನಂತೆ 21 ಟಿ.ಎಂ.ಸಿ ನೀರು ಬೇಕು. ಮೈಸೂರಿಗೆ ಪ್ರತಿ ದಿನ 250 ಕ್ಯೂಸೆಕ್ನಂತೆ 4.5 ಟಿ.ಎಂ.ಸಿ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ 4 ಟಿ.ಎಂ.ಸಿ ನೀರು ಬೇಕು. ಇದಲ್ಲದೆ 11,68,500 ಎಕರೆ ಬೆಳೆಗಳಿಗೆ 27 ಟಿ.ಎಂ.ಸಿ ನೀರು ಬೇಕು. ಹೀಗಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಬೇಕು' ಎಂದು ಸಮಿತಿ ಸಂಚಾಲಕ ಎಂ.ಲಕ್ಷ್ಮಣ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
`ಸುಪ್ರಿಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕಾವೇರಿ ಕಣಿವೆಯಲ್ಲಿ ಒಟ್ಟಾರೆ 37 ಟಿ.ಎಂ.ಸಿ ನೀರು ಇದೆ ಎಂದು ಮಾಹಿತಿ ನೀಡಿರುವುದು ಸರಿಯಲ್ಲ. ಉಪಯೋಗಿಸಬಹುದಾದ ನೀರಿನ ಪ್ರಮಾಣ ಹೇಳಬೇಕಾಗಿತ್ತು. ಉಪಯೋಗಿಸಲು ದೊರಕುವಂತಹ ನೀರು ಕೇವಲ 15.33 ಟಿ.ಎಂ.ಸಿ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಸಿ.ಎಂ.ಸಿ ತನಿಖಾ ತಂಡವನ್ನು ಎರಡೂ ರಾಜ್ಯಗಳಿಗೆ ಕಳುಹಿಸಿ ಪರಿಸ್ಥಿತಿ ಅವಲೋಕಿಸಿದ ನಂತರ ಸುಪ್ರೀಂ ಕೋರ್ಟ್ ತೀರ್ಪು ನೀಡುವಂತೆ ಮನವಿ ಮಾಡಬೇಕು' ಎಂದು ಹೇಳಿದರು.
ರೂ. 120 ಕೋಟಿ ವಿಮೆ!
ರೈತರು ಬೆಳೆ ಕಳೆದುಕೊಳ್ಳಬಹುದು ಎಂಬ ಆತಂಕದಿಂದ ತಮಿಳುನಾಡು ಸರ್ಕಾರ ಅಲ್ಲಿನ ರೈತರು ಬೆಳೆದ ಬೆಳೆಗೆ ವಿಮೆ ಮಾಡಲು ನಿರ್ಧರಿಸಿದ್ದು, ಬುಧವಾರ ರೂ. 120 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದೇ ರೀತಿ ನಮ್ಮ ರೈತರಿಗೂ ಬೆಳೆ ವಿಮೆ ಹಣವನ್ನು ಭರಿಸಲು ಸರ್ಕಾರ ಕೂಡಲೇ ನಿರ್ಧರಿಸಬೇಕು. ಇದರಿಂದ ಈ ಭಾಗದ ರೈತರಲ್ಲಿ ಆಶಾಭಾವನೆ ಉಂಟಾಗಲಿದೆ. ಅನಾಹುತ ತಡೆಗಟ್ಟಬಹುದು.
ಕಾವೇರಿ ತಾಂತ್ರಿಕ ಸಮಿತಿ