ಬೆಂಗಳೂರು: `ರಾಜ್ಯದಲ್ಲಿ ಕಲೆ ಮತ್ತು ಕಲಾವಿದರಿಗೆ ಕೊರತೆಯಿಲ್ಲ. ನಾಟಕ, ಯಕ್ಷಗಾನ, ಚಿತ್ರಕಲೆ, ವಾಸ್ತುಶಿಲ್ಪ ಸೇರಿದಂತೆ ಎಲ್ಲಾ ಕಲೆಗಳು ಮೇಳೈಸಿರುವ ಈ ನಾಡಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಶ್ಲಾಘಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಮಹೋತ್ಸವದ ಪ್ರಯುಕ್ತ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲೆಲ್ಲಾ ಅಕಾಡೆಮಿಗಳಿಗೆ ಸರ್ಕಾರದಿಂದ ಕೇವಲ 10 ಲಕ್ಷ ರೂಪಾಯಿ ಮಾತ್ರ ಅನುದಾನ ದೊರೆಯುತ್ತಿತ್ತು. ಆದರೆ, ಪ್ರಸ್ತುತ 40 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಕರೆ ನೀಡಿದರು.
`ನಾಟಕ ಅಕಾಡೆಮಿ ಸ್ಥಾಪನೆಯಾಗಿ ಐವತ್ತು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಐವತ್ತು ಕಲಾವಿದರಿಗೆ ಸನ್ಮಾನ ಮಾಡುವ ಚಿಂತನೆಯೇ ಸೃಜನಶೀಲತೆಯಿಂದ ಕೂಡಿದೆ~ ಎಂದು ಹೇಳಿದರು.
ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, `ರಾಜ್ಯದ ಮೂಲೆ ಮೂಲೆಯಲ್ಲಿರುವ ರಂಗಭೂಮಿ ನಟ- ನಟಿಯರನ್ನು ಒಗ್ಗೂಡಿಸುವ ಮೂಲಕ ನಾಟಕ ಅಕಾಡೆಮಿಯು ಉತ್ತಮ ಸಾಧನೆ ಮಾಡಿದ್ದು, ಇದು ಹೀಗೆ ಮುಂದುವರಿಯಲಿ~ ಎಂದು ಆಶಿಸಿದರು.
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು `ರಂಗಸಂಪನ್ನರು ಮಾಲಿಕೆ- ರಂಗ ಪರಿಚಾರಕ ಪದ್ದಣ್ಣ~ ಪುಸ್ತಕ ಬಿಡುಗಡೆ ಮಾಡಿದರು. ರಂಗ ಸಂಘಟಕ ಡಾ.ಎಚ್.ಶಾಂತಾರಾಮ್, ಹೊರನಾಡ ರಂಗಕರ್ಮಿ ಬೈಲೂರು ಬಾಲಚಂದ್ರರಾವ್, ರಂಗ ಪ್ರೋತ್ಸಾಹಕ ಕೆ.ಚೆನ್ನಪ್ಪ ಅವರಿಗೆ `ಜೀವಮಾನ ರಂಗಸಾಧನೆ~ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳ 47 ಮಂದಿ ರಂಗ ಸಂಘಟಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಕಂಪೆನಿಗಳಿಗೆ ಉಡುಪು ಒದಗಿಸುವ ಸಂಸ್ಥೆಗಳಿಗೆ ಧನ ಸಹಾಯ ನೀಡಲಾಯಿತು. ರಂಗಕರ್ಮಿ ಎಚ್.ಜಿ.ದತ್ತಾತ್ರೇಯ, ರಂಗಶಂಕರ ಟ್ರಸ್ಟಿ ಆರುಂಧತಿನಾಗ್ ಇತರರು ಉಪಸ್ಥಿತರಿದ್ದರು.