ಮುಂಬೈ (ಪಿಟಿಐ): ಕಳೆದ ಐದು ತಿಂಗಳಿಂದ ಟೋಗೊ ಜೈಲಿನಲ್ಲಿ ಬಂದಿಯಾಗಿದ್ದ ಭಾರತದ ನಾವಿಕ ಸುನೀಲ್ ಜೇಮ್ಸ್ ಅವರು ಶುಕ್ರವಾರ ಇಲ್ಲಿಗೆ ಮರಳಿದ್ದಾರೆ.
ಈಚೆಗೆ ನಿಧನ ಹೊಂದಿದ ಜೇಮ್ಸ್ ಅವರ ಮಗುವಿನ ಅಂತ್ಯಕ್ರಿಯೆಗೆ ಕುಟುಂಬ ಸದಸ್ಯರು ಸಿದ್ಧತೆ ಮಾಡಿಕೊಂಡ ಬೆನ್ನಲ್ಲೆ ಅವರು ಕುಟುಂಬ ಸೇರಿಕೊಂಡಿದ್ದಾರೆ.
ಡಿ.2ರಂದು ಮರಣ ಹೊಂದಿದ 11 ತಿಂಗಳ ಎಳೆಗೂಸಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಾನವೀಯ ನೆಲೆಗಟ್ಟಿನಲ್ಲಿ ಜೇಮ್ಸ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಭಾರತದ ಅಧಿಕಾರಿಗಳು ಕೋರಿದ್ದರು. ಈ ಮನವಿ ಪುರಸ್ಕರಿಸಿದ ಟೋಗೊ ಅಧಿಕಾರಿಗಳು, ಗುರುವಾರ ಸುನೀಲ್ ಅವರನ್ನು ಬಿಡುಗಡೆ ಮಾಡಿದ್ದರು.
ಜೇಮ್ಸ್ ಬಿಡುಗಡೆ ಸಂಬಂಧ ಅವರ ಕುಟುಂಬ ಸದಸ್ಯರು ಕಳೆದ ಕೆಲ ದಿನಗಳಿಂದ ಭಾರತದ ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹೇರಿದ್ದರು. ಅಲ್ಲದೇ ಜೇಮ್ಸ್ ಅವರ ಪತ್ನಿ ಅದಿತಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದರು.
‘ಕಳೆದ 5 ತಿಂಗಳಲ್ಲಿ ಏನೆಲ್ಲ ಘಟಿಸಿದೆಯೋ ಅದು ಭೂತಕಾಲ ಸೇರಿದೆ. ಒಬ್ಬ ತಂದೆಯಾಗಿ ನನ್ನ ಕರ್ತವ್ಯ ನಿರ್ವಹಿಸಲು ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ಅದನ್ನು ಗೌರವಿಸಿ’ ಎಂದು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೇಮ್ಸ್ ಹೇಳಿದರು.
‘ನನ್ನ ಬಿಡುಗಡೆಗೆ ಕಾರಣರಾದ ಪ್ರಧಾನಿ, ಅವರ ಕಚೇರಿ, ಅಕ್ರಾದಲ್ಲಿರುವ ಭಾರತದ ಹೈಕಮಿಷನರ್, ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಕಡಲ್ಗಳ್ಳರಿಗೆ ನೆರವು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಕ್ಯಾಪ್ಟನ್ ಜೇಮ್ಸ್ ಅವರನ್ನು ಟೋಗೊ ದ್ವೀಪದ ಅಧಿಕಾರಿಗಳು ಬಂಧಿಸಿದ್ದರು. ಡಿ.2ರಂದು ಜೇಮ್ಸ್ ಅವರು ಜೈಲಿನಲ್ಲಿದ್ದಾಗ ಅವರ ಪುತ್ರ ವಿವಾನ್ ಕರುಳಿನ ಸಮಸ್ಯೆಯಿಂದ ಮೃತಪಟ್ಟಿದ್ದ.
ಜೇಮ್ಸ್ ಅವರು ಮರಳಿ ಬರುವವರೆಗೆ ಅಂತ್ಯಸಂಸ್ಕಾರ ನಡೆಸದಿರಲು ಪಟ್ಟು ಹಿಡಿದ ಕುಟುಂಬ ಸದಸ್ಯರು, ಮಗುವಿನ ದೇಹವನ್ನು ಶವಾಗಾರದಲ್ಲಿ ಇಟ್ಟಿದ್ದರು.