ಬೆಂಗಳೂರು: `ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪ್ರತಿ ತಿಂಗಳು 5ರೊಳಗೆ ವೇತನ ಬಟವಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.
ಜೆಡಿಎಸ್ನ ಪುಟ್ಟಣ್ಣ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. `ಶಿಕ್ಷಕರ ವೇತನ ಅನುದಾನವನ್ನು ನೇರವಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ. ವೇತನ ಬಟವಡೆ ಇನ್ನಷ್ಟು ಸರಳಗೊಳಿಸಲು ಇರುವ ಮಾರ್ಗೋಪಾಯಗಳ ಕುರಿತು ಚರ್ಚಿಸಲಾಗುತ್ತಿದೆ' ಎಂದರು.
`ಪ್ರತಿ ತಿಂಗಳ ಕಡೆಯ ದಿನಾಂಕದಂದೇ ವೇತನ ಪಾವತಿಯಾಗಬೇಕು ಎನ್ನುವುದು ಸರ್ಕಾರದ ಆಶಯ. ಈ ಕುರಿತು ಹಲವು ಬಾರಿ ಸುತ್ತೋಲೆ ಹೊರಡಿಸಲಾಗಿದ್ದರೂ ವಿಳಂಬ ತಪ್ಪಿಲ್ಲ. ಹೀಗಾಗಿ ಪ್ರತಿ ತಿಂಗಳ 5ರೊಳಗೆ ವೇತನ ಪಾವತಿ ಆಗಲೇಬೇಕು ಎಂಬ ನಿಯಮ ಕಡ್ಡಾಯಗೊಳಿಸಲಾಗಿದೆ' ಎಂದು ವಿವರಿಸಿದರು.
20ರೊಳಗೆ ಆಯಾ ತಿಂಗಳ ವೇತನದ ಬಿಲ್ ಸಿದ್ಧಪಡಿಸಿ, 26ರೊಳಗೆ ಖಜಾನೆಗೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ' ಎಂದು ವಿವರಿಸಿದರು.