ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ

Last Updated 15 ಸೆಪ್ಟೆಂಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಸುವರ್ಣ ವಸ್ತ್ರ ನೀತಿ ಯೋಜನೆಯಡಿ 2013ರವರೆಗಿನ ಐದು ವರ್ಷಗಳ ಕಾಲಮಿತಿಯಲ್ಲಿ ಒಟ್ಟು ಐದು ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿಯನ್ನು ಸಾಧಿಸಲು ಸರ್ಕಾರ ಉದ್ದೇಶಿಸಿದೆ~ ಎಂದು ಜವಳಿ ಇಲಾಖೆ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ಸಹಯೋಗದಲ್ಲಿ ಗುರುವಾರ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಜವಳಿ ಕ್ಷೇತ್ರದಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಬಂಡವಾಳವನ್ನು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಲು, ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ರಿಯಾಯಿತಿ ಮತ್ತು ಪ್ರೋತ್ಸಾಹಕ ಕ್ರಮ ಘೋಷಣೆ ಮಾಡಿದೆ~ ಎಂದರು.

`ವಿದ್ಯುತ್ ಮಗ್ಗ ನೇಕಾರರಿಗೆ ಅನುಕೂಲವಾಗುವಂತೆ ಹೊಸದಾಗಿ ವಿದ್ಯುತ್‌ಮಗ್ಗಗಳನ್ನು ಖರೀದಿಸಲು ಶೇ 50ರಿಂದ 90ರಷ್ಟು ಸಹಾಯಧನವನ್ನು ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೇಕಾರರಿಗೆ ಒದಗಿಸಲಾಗುತ್ತಿದೆ. ಈ ಬಾರಿ 1500 ಜನರಿಗೆ ಸಹಾಯಧನ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.

ಸಿದ್ಧ ಉಡುಪು ಘಟಕಗಳಿಗೆ ಮಾನವ ಸಂಪನ್ಮೂಲ ಪೂರೈಸಲು ಸುವರ್ಣ ವಸ್ತ್ರ ನೀತಿ ಯೋಜನೆಯಡಿ ಸೀವಿಂಗ್ ಯಂತ್ರ ಆಪರೇಟರ್ ಕೋರ್ಸ್‌ನಡಿ 67,684 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಇಲಾಖೆಯು 3.5 ಕೋಟಿ ರೂಪಾಯಿ ವ್ಯಯ ಮಾಡಿ ಉದ್ಯೋಗ ಒದಗಿಸಲಾಗಿದೆ~ ಎಂದರು.

`ದೊಡ್ಡಬಳ್ಳಾಪುರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ರೂ 3 ಕೋಟಿ ಬಂಡವಾಳ ಹೂಡಿದ್ದು, 7500 ಜನರಿಗೆ ಉದ್ಯೋಗ ಕಲ್ಪಿಸಿದೆ. ಜೊತೆಗೆ ಸರ್ಕಾರವು ರೂ 4.8 ಕೋಟಿ ಸಹಾಯಧನ ಒದಗಿಸಿದೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು ರೂ 1070 ಕೋಟಿ ಯೋಜನಾ ಮೊತ್ತದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ಇದರಿಂದ 44,500 ಉದ್ಯೋಗ ಸೃಷ್ಟಿಯಾಗಲಿದೆ~ ಎಂದರು.

ಜವಳಿ ಅಭಿವೃದ್ಧಿ ಆಯುಕ್ತ ಡಿ.ಎ.ವೆಂಕಟೇಶ್ ಮಾತನಾಡಿ, ಗಾರ್ಮೆಂಟ್ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬಹುತೇಕ ವಲಸೆಗಾರರು ಕಡಿಮೆ ಓದಿದವರಾಗಿರುತ್ತಾರೆ. ಆದ್ದರಿಂದ ಅಂಥವರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು ಈ ಕಾರ್ಯಾಗಾರ   ಏರ್ಪಡಿಸಲಾಗಿದೆ~ ಎಂದು ತಿಳಿಸಿದರು. ಜಿ.ಪಂ.ಅಧ್ಯಕ್ಷ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT