ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸಾವಿರ ಹೆಕ್ಟೇರ್‌ನಲ್ಲಿ ತಾಳೆ

Last Updated 24 ಜನವರಿ 2012, 10:55 IST
ಅಕ್ಷರ ಗಾತ್ರ

ಸುಳ್ಯ: ರಾಜ್ಯದಲ್ಲಿ ತಾಳೆ ಬೆಳೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರೂ.33 ಕೋಟಿ ನೀಡಿದೆ. ರಾಜ್ಯ ಸರ್ಕಾರವೂ ರೂ.6 ಕೋಟಿ ಸೇರಿಸಿ ಒಟ್ಟು ರೂ.39 ಕೋಟಿ ವೆಚ್ಚದಲ್ಲಿ ತಾಳೆ ಬೆಳೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ವರ್ಷದಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಸುವ ಗುರಿ ಇದೆ ಎಂದು ರಾಜ್ಯ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ.ರವೀಂದ್ರನಾಥ್ ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತಾಳೆ ಬೆಳೆ ಅಭಿವೃದ್ಧಿ ಯೋಜನೆಗೆ ಸರ್ಕಾರ ಮತ್ತು ಇಲಾಖೆ ಕಾರ್ಯ ಯೋಜನೆ ಹಾಕಿಕೊಂಡಿದ್ದು, ಇದರ ಅನುಷ್ಠಾನೋತ್ಸವಕ್ಕೆ ಸೋಮವಾರ ಸುಳ್ಯದಲ್ಲಿ ತಾಳೆ ಗಿಡಕ್ಕೆ ಅಮೃತ ಜಲ ಎರೆಯುವುದರ ಮೂಲಕ ಸಚಿವರು ಚಾಲನೆ ನೀಡಿದರು.

ತಾಳೆ ಬೆಳೆ ಅಧಿಕ ವರಮಾನ ನೀಡುವ ಬೆಳೆ. ಕಲಬೆರಕೆ ಇಲ್ಲದ ತಾಳೆ ಎಣ್ಣೆಗೆ ಬೇಡಿಕೆ ಇದೆ. ಒಂದು ಎಕರೆಯಲ್ಲಿ 60-70 ಟನ್ ತಾಳೆ ಇಳುವರಿ ಪಡೆಯಬಹುದು. ನೆಟ್ಟು ಫಸಲು ಬರುವವರೆಗೆ ಅಂತರ ಬೆಳೆ ಬೆಳೆದು ಆದಾಯ ಪಡೆಯಬಹುದು ಎಂದು ಅವರು ವಿವರಿಸಿದರು.

ಒಂದು ಟನ್ ತಾಳೆ ಹಣ್ಣಿಗೆ ರೂ.700 ಸಬ್ಸಿಡಿ ನೀಡಲಾಗುವುದು. ಈ ಭಾಗಲ್ಲಿ 10 ಸಾವಿರ ಎಕರೆಗಿಂತ ಜಾಸ್ತಿ ಬೆಳೆ ಬೆಳೆದರೆ ಫ್ಯಾಕ್ಟರಿ ತೆರೆಯಲು ಪರವಾನಗಿ ನೀಡಲಾಗುವುದು ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಕೃಷಿಕರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ದೊರಕಿಸುವ ನಿಟ್ಟಿನಲ್ಲಿ ಮುಖ್ಯಮಂತಿ ಜತೆ ಚರ್ಚಿಸಲಾಗುವುದು ಎಂದರು. ಅಡಿಕೆಗೆ ಹಳದಿ ರೋಗ ಬರುವುದಕ್ಕೆ ನಿಖರ ಕಾರಣ ತಿಳಿಸಲು ಇದುವರೆಗೂ ಯಾವುದೇ ತಜ್ಞ ಸಮಿತಿಯಿಂದಲೂ ಸಾಧ್ಯವಾಗಿಲ್ಲ. ಆದ್ದರಿಂದ ಕೃಷಿಕರು ತಾಳೆ ಬೆಳೆಯಂತಹ ಪರ್ಯಾಯ ಕೃಷಿಬಗ್ಗೆ ಯೋಚಿಸುವುದು ಅನಿವಾರ್ಯವಾಗಿದೆ. ದ.ಕ. ಉಡುಪಿ ಜಿಲ್ಲೆಗಳಲ್ಲಿ ತಾಳೆ ಬೆಳೆ ಬೆಳೆಯಲು ಉತ್ತಮ ವಾತಾವರಣವಿದೆ. ಕೃಷಿಕರು ಇದನ್ನು ಬಳಸಿಕೊಳ್ಳಬೇಕು.
 
ಅಂತರ ಬೆಳೆ ಬೆಳೆದು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ರೂ.2 ಸಾವಿರ ಕೋಟಿ ಬಜೆಟ್: ತೋಟಗಾರಿಕೆ ಇಲಾಖೆಗೆ ಕಳೆದ ಬಾರಿ ಬಜೆಟ್‌ನಲ್ಲಿ ರೂ.753 ಕೋಟಿ ಮೀಸಲಿರಿಸಿತ್ತು. ಈ ಬಾರಿ ಎರಡು ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿರಿಸಬೇಕೆಂದು ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡಿ ಬೇಡಿಕೆ ಇಡಲಾಗಿದೆ ಎಂದು ಅವರು ಹೇಳಿದರು.ಕೃಷಿಯಲ್ಲಿ ಯಂತ್ರೋಪಕರಣ ಬಳಕೆಗೆ ಸರ್ಕಾರ ಒತ್ತು ನೀಡಿ ನೆರವು ಒದಗಿಸುತ್ತಿದೆ.

ಕ್ಯಾಂಪ್ಕೊ ಸಂಸ್ಥೆ ಬೇಡಿಕೆಯಂತೆ ಅಡಿಕೆ ಸುಲಿಯುವ ಯಂತ್ರಕ್ಕೆ ಸಬ್ಸಿಡಿ ನೀಡುವ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಮಾತನಾಡಿ, ತಾಲ್ಲೂಕಿನ ಹಲವು ಕಡೆ ಅಡಿಕೆ ಹಳದಿ ರೋಗದಿಂದ ರೈತರು ತತ್ತರಿಸಿದ್ದು, ಅವರಿಗೆ ಪರ್ಯಾಯ ಬೆಳೆಯಾಗಿ ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಸುಳ್ಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ, ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್, ಕೆ.ಎಫ್.ಡಿ.ಸಿ. ಅಧ್ಯಕ್ಷ ಎಸ್.ಎನ್.ಮನ್ಮಥ, ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್, ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಡಾ.ನಂದಾ, ತೋಟಗಾರಿಕೆ ನಿರ್ದೇಶನಾಲಯದ ತಾಳೆ ಬೆಳೆ ಯೋಜನೆ ಹೆಚ್ಚುವರಿ ನಿರ್ದೇಶಕ ಡಾ.ಡಿ.ಎಲ್.ಮಹೇಶ್ವರ್, ಉಡುಪಿ ಜಿಲ್ಲಾ ಉಪ ನಿರ್ದೇಶಕ ಸಂಜಯ್, ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಪ್ರವೀಣ್, ರಾಜ್ಯ ತಾಳೆ ಬೆಳೆಗಾರರ ಸಂಘ ಅಧ್ಯಕ್ಷ ಗಣೇಶಪ್ಪ, ಕಾರ್ಯದರ್ಶಿ ಅನ್ಬು ಇದ್ದರು.

ಗೋದ್ರೆಜ್ ಅಗ್ರೋವೆಟ್ ಕಂಪೆನಿ ಉಪಾಧ್ಯಕ್ಷ ಆರ್.ಆರ್.ಗೋವಿಂದನ್ ಅವರಿಗೆ ಸಚಿವರು ಸರ್ಕಾರದ ಒಡಂಬಡಿಕೆ ಪತ್ರ ಹಸ್ತಾಂತರಿಸಿದರು. ಪ್ರಗತಿಪರ ತಾಳೆ ಬೆಳೆಗಾರರಾದ ಪುರುಷೋತ್ತಮ ನಾಡಗೌಡ ಗೋಕಾಕ್ ಮತ್ತು ತೊಡಿಕಾನ ವಸಂತ ಭಟ್ ಅವರನ್ನು ಸನ್ಮಾನಿಸಲಾಯಿತು.

ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ಕೃಷಿಕರಿಗೆ ಸರ್ಕಾರದ ಸೌಲಭ್ಯಗಳು, ಬೆಳೆ ಅಭಿವೃದ್ಧಿ ಯೋಜನೆಯಡಿ ಗೋದ್ರೆಜ್ ಅಗ್ರೋವೆಟ್ ಕಂಪೆನಿಯ ಪಾತ್ರ ಹಾಗೂ ಜವಾಬ್ದಾರಿಗಳು ಕುರಿತ ಮಾಹಿತಿ, ತಾಳೆ ಬೆಳೆ ಕೃಷಿಕರೊಂದಿಗೆ ಸಂವಾದ ನಡೆಯಿತು.

35 ಹೆಸರು 8 ಹಾಜರು!
ತಾಳೆ ಬೆಳೆ ಅಭಿವೃದ್ಧಿ ಯೋಜನೆ ಅನುಷ್ಠಾನೋತ್ಸವ ಉದ್ಘಾಟನೆ ಮಧ್ಯಾಹ್ನ 12.30ಕ್ಕೆ ನಡೆಯಬೇಕಿತ್ತು. ಆದರೆ ಸಚಿವರಿಗಾಗಿ ಕಾದು ರೈತರು ತಾಳ್ಮೆ ಕಳೆದುಕೊಂಡರು. ಸಚಿವರು ಮಧ್ಯಾಹ್ನ 2.45 ಕ್ಕೆ ಆಗಮಿಸಿದ ನಂತರ ಉದ್ಘಾಟನಾ ಸಮಾರಂಭ ನಡೆಯಿತು.

ಸುಳ್ಯ ಪ.ಪಂ. ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿವೇತನವನ್ನು ಸಚಿವರಿಂದಲೇ ವಿತರಿಸಲು ವಿದ್ಯಾರ್ಥಿಗಳನ್ನು ಬರಹೇಳಲಾಗಿತ್ತು. ತರಗತಿ ಬಿಟ್ಟು ಬಂದಿದ್ದ ಅವರೂ ಅಷ್ಟು ಹೊತ್ತು ಕಾಯಬೇಕಾಯಿತು.

ಆಮಂತ್ರಣ ಪತ್ರಿಕೆಯಲ್ಲಿ ಸಚಿವರು, ಅಧಿಕಾರಿಗಳು, ಗಣ್ಯರು ಸೇರಿದಂತೆ 35 ಮಂದಿಯ ಹೆಸರಿತ್ತು. ಆದರೆ ಬಂದದ್ದು 8 ಮಂದಿ ಮಾತ್ರ!

ಅಡಿಕೆಗೆ ಹಳದಿ ರೋಗ ಪೀಡಿತ ಕೃಷಿಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು. ಆದರೆ ಇದನ್ನು ಲಘುವಾಗಿ ತೆಗೆದುಕೊಂಡ ಸಚಿವರು, ನಮ್ಮ ಭಾಗದಲ್ಲಿ ಇದಕ್ಕಿಂತಲೂ ದೊಡ್ಡ ಸಮಸ್ಯೆಯಿದೆ. ನೀವು ಬೆಳೆಯನ್ನು ಬದಲಾಯಿಸಿ ನೋಡಿ. ಆದರೂ ಈ ಕುರಿತು ನಿಮ್ಮವರೇ ಆದ ಮುಖ್ಯಮಂತ್ರಿಗಳಲ್ಲಿಗೆ ನಿಯೋಗ ಹೋಗುತ್ತಿದ್ದರೆ ನಾನೂ ಬರುತ್ತೇನೆ ಎಂದರು.

ಸರ್ಕಾರದ ಸಹಾಯ ತುಪ್ಪದಂತೆ
ದಕ್ಷಿಣ ಕನ್ನಡ ಜಿಲ್ಲೆಯ ರೈತರು ಪುಣ್ಯವಂತರು. ಒಂದಲ್ಲ ಒಂದು ರೀತಿಯ ಪರ್ಯಾಯ ಬೆಳೆಯನ್ನು ಬೆಳೆಸಿ ಬದುಕು ಸಾಗಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೃಷಿಕರಿಗೆ ಹಲವಾರು ಭಾರಿ ಕೃಷಿ ಕೈಕೊಟ್ಟು ಜೀವನಧಾರಕ್ಕೆ ಗತಿಯೇ ಇಲ್ಲದಂತಾಗುತ್ತದೆ.

ರೈತರೇ ಉತ್ತಮ ಕೃಷಿ ನಡೆಸಿ ತಮ್ಮ ಬಾಳನ್ನು ಹಸನಾಗಿಸಬೇಕು. ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ ಅಂದರೆ ಸಾಧ್ಯವಿಲ್ಲ.  ಸರ್ಕಾರದ ಸಹಾಯವೆಂದರೆ ಅದು ಅನ್ನದ ಜತೆ ಸಿಗುವ ತುಪ್ಪದಂತೆ ಅಲ್ಪ ಸ್ವಲ್ಪ ಇರುತ್ತದೆ ಎಂದು ರವೀಂದ್ರನಾಥ್ ಹೇಳಿದರು.

ರೈತಗೀತೆಗೆ ತಾಂತ್ರಿಕ ಅಡಚಣೆ
ತಾಂತ್ರಿಕ ದೋಷ ಕಂಡು ಬಂದು ರೈತಗೀತೆಯನ್ನೇ ಹಾಡದ ಘಟನೆ ತಾಳೆ ಬೆಳೆ ಅನುಷ್ಠಾನೋತ್ಸವ ಸಮಾರಂಭದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ರೆಕಾರ್ಡ್ ಮಾಡಿ ಹಾಡಿಸಲಾಯಿತು. ಬಳಿಕ ರೈತಗೀತೆ ಎಂದು ನಿರೂಪಕ ಹೇಳಿ ಅತಿಥಿಗಳು ಮತ್ತಿತರರು ಸ್ವಲ್ಪ ಹೊತ್ತು ಎದ್ದು ನಿಂತರೂ ರೈತ ಗೀತೆ ಮಾತ್ರ ಹಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT