ಬೆಂಗಳೂರು: ಸರ್ಜಾಪುರ ರಸ್ತೆಯ ಚೌಲಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ 56 ಮನೆಗಳನ್ನು ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದರು.
ಸುಮಾರು ರೂ 50 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಕೆರೆಯ ಒಟ್ಟು ವಿಸ್ತೀರ್ಣ 61 ಎಕರೆ 37 ಗುಂಟೆಗಳಷ್ಟು ಇದ್ದು, ಕಳೆದ ಒಂದೂವರೆ ವರ್ಷಗಳ ಹಿಂದೆ ಕೆಲವರು 3 ಎಕರೆ 10 ಗುಂಟೆಯಷ್ಟು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ತಿಳಿಸಿದರು.
ಕೆರೆಯ ಪ್ರದೇಶವನ್ನು ಸರ್ವೆ ಮಾಡಿಸಿ, ಎಲ್ಲೆಗಳನ್ನು ಗುರುತಿಸಿ, ಒತ್ತುವರಿ ಸ್ಥಳದಲ್ಲಿರುವ ಮನೆಗಳನ್ನು ತೆರವುಗೊಳಿಸುವಂತೆ ಸ್ಥಳೀಯ ತಹಸೀಲ್ದಾರ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಯಾರೂ ಇದುವರೆಗೆ ಮನೆ ತೆರವು ಮಾಡಿರಲಿಲ್ಲ ಎಂದು ಹೇಳಿದರು.
ಪಾಲಿಕೆಯ 55 ಕೆರೆಗಳನ್ನು ಸರ್ವೆ ಮಾಡಿಸಿ, ಎಲ್ಲೆಗಳನ್ನು ಗುರುತಿಸಿದ್ದು, ಸುಮಾರು 150 ಎಕರೆಯಷ್ಟು ಕೆರೆ ಪ್ರದೇಶ ಒತ್ತುವರಿಯಾಗಿದ್ದು ಕಂಡುಬಂದಿದೆ. ಅದರಲ್ಲಿ 90 ಎಕರೆಯಷ್ಟು ಒತ್ತುವರಿ ತೆರವುಗೊಳಿಸಲಾಗಿದೆ ಮತ್ತು ಉಳಿದ ಕಡೆಗೂ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.
ಬಿಎಂಟಿಎಫ್ ಪೊಲೀಸರ ಬಂದೋಬಸ್ತ್ ನಡುವೆ ಜೆಸಿಬಿಗಳ ಸಹಾಯದಿಂದ ಮನೆ ನೆಲಸಮಗೊಳಿಸಲಾಯಿತು. ಪರಿಸರ ವಿಭಾಗದ ಮುಖ್ಯ ಎಂಜಿನಿಯರ್ ಬಿ.ವಿ. ಸತೀಶ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.