ಧಾರವಾಡ: ಆರ್ಥಿಕ ಮಿತವ್ಯಯ ಹಿನ್ನೆಲೆಯಲ್ಲಿ ತಡೆಹಿಡಿಯಲಾದ ಸುಮಾರು 700 ಶಿಕ್ಷಣ ಸಂಸ್ಥೆಗಳ (1992ರಿಂದ 1995ರವರೆಗೆ ಸ್ಥಾಪನೆಯಾದ) ನಾಲ್ಕು ಸಾವಿರಕ್ಕೂ ಅಧಿಕ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನಾನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಶಿಕ್ಷಕರು ನಡೆಸುತ್ತಿರುವ ಸತ್ಯಾಗ್ರಹ ಗುರುವಾರ 50 ದಿನಗಳನ್ನು ಪೂರೈಸಿದೆ. ಇದಕ್ಕೂ ಜಗ್ಗದ ಸರ್ಕಾರದ ಕ್ರಮವನ್ನು ಖಂಡಿಸಿ ನಡೆಸುತ್ತಿರುವ ಆಮರಣಾಂತ ಉಪವಾಸ ಸಹ 10 ದಿನ ಪೂರೈಸಿದೆ.
ಹೋರಾಟದ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕರ್ನಾಟಕ ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರ ಹಾಗೂ ಆಡಳಿತ ಮಂಡಳಿಗಳ ಸಂಘ~ದ ಪ್ರಧಾನ ಕಾರ್ಯದರ್ಶಿ ಗಿರೀಶ ಯಾದವಾಡ, `ಸರ್ಕಾರ ನಮ್ಮನ್ನು ವೇತನಾನುದಾನಕ್ಕೆ ಒಳಪಡಿಸುತ್ತದೆ ಎಂಬ ನಿರೀಕ್ಷೆಯಿಂದ ಸಾಲ ಮಾಡಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆಂದು ತಂದು ಕೊಟ್ಟ ಹಣದ ಬಡ್ಡಿಯೇ ಅಸಲಿಗಿಂತ ಹೆಚ್ಚಾಗಿದೆ~ ಎಂದು ನುಡಿದರು.