ಚಿಂತಾಮಣಿ: ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದು, 1.25 ಕೋಟಿ ಕುಟುಂಬಗಳಿವೆ. ಅದರಲ್ಲಿ 1.5 ಕೋಟಿ ಜನರಿಗೆ ಪಡಿತರ ಚೀಟಿ ವಿತರಿಸಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ಸೋಮವಾರ ಹೇಳಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.ರಾಜ್ಯದ 1.25 ಕೋಟಿ ಕುಟುಂಬಗಳಲ್ಲಿ ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಸುಮಾರು 25 ಲಕ್ಷ ಕುಟುಂಬಗಳು ಪಡಿತರ ಚೀಟಿಗಳನ್ನು ಪಡೆದಿಲ್ಲ. ಇನ್ನೂ ಅನೇಕರಿಗೆ ಪಡಿತರ ಚೀಟಿಗಳನ್ನು ನೀಡಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಹೀಗಿರುವಾಗ ಸುಮಾರು 50 ಲಕ್ಷ ಹೆಚ್ಚುವರಿ ಪಡಿತರ ಚೀಟಿಗಳು ಯಾರ ಬಳಿ ಇವೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಹೆಚ್ಚುವರಿ ಕಾರ್ಡ್ಗಳಿಂದ ಪ್ರತಿ ತಿಂಗಳು ರೂ. 100ರಿಂದ 150 ಕೋಟಿ ಯಾರ ಜೇಬಿಗೆ ಹೋಗುತ್ತಿದೆ. ಕೆಲವರ ಕುಟುಂಬಗಳಲ್ಲಿ ಎರಡು ಮೂರು ಕಾರ್ಡ್ಗಳಿರುವುದು, ನ್ಯಾಯಬೆಲೆ ಅಂಗಡಿಗಳ ಮಾಲೀಕರೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೆಚ್ಚುವರಿ ಕಾರ್ಡ್ಗಳನ್ನು ಇಟ್ಟುಕೊಂಡು ಅವ್ಯವಹಾರ ನಡೆಸುತ್ತಿರಬೇಕು ಎಂದು ತಿಳಿಸಿದರು.
ಪಡಿತರ ಚೀಟಿಗಳಿಗಾಗಿ ಮನೆ ನಂಬರ್ ಅಥವಾ ವಿದ್ಯುತ್ ಮೀಟರ್ ನಂಬರ್ ಅಳವಡಿಸಬೇಕೆಂಬ ಆದೇಶವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಪ್ರತಿಯೊಂದು ಮನೆಗೂ ಒಂದೊಂದು ಕಾರ್ಡ್ ಮಾತ್ರ ಇರುವಂತೆ ಕ್ರಮಕೈಗೊಳ್ಳಲಾಗುವುದು. ಹೆಚ್ಚುವರಿ ಪಡಿತರ ಕಾರ್ಡ್ ಹೊಂದಿರುವವರನ್ನು ಶಿಕ್ಷಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದರು. ಶಾಸಕ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಡಾ.ಮಂಜುಳಾ, ಬೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.