ನವದೆಹಲಿ (ಪಿಟಿಐ): 1962ರಲ್ಲಿ ನಡೆದ ಭಾರತ ಚೀನಾ ಸಮರದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಸರ್ಕಾರ ಇದೇ ಮೊದಲ ಬಾರಿಗೆ (50 ವರ್ಷಗಳ ನಂತರ) ನಡೆಸಿದೆ.
ಸಮರದಲ್ಲಿ ಸೋಲು ಕಂಡ ಭಾರತದ ಭಾರಿ ಪ್ರಮಾಣದ ಪ್ರದೇಶ ಚೀನಾದ ಪಾಲಾಗಿದ್ದು ಇತಿಹಾಸ.
ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ, 1962ರಲ್ಲಿ ನಡೆದಂತೆ ಭಾರತ- ಚೀನಾ ಸಮರ ಮತ್ತೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಿದರು.
1962ರಲ್ಲಿ ಭಾರತಕ್ಕೆ ಇದ್ದ ಸ್ಥಿತಿ ಈಗ ಇಲ್ಲ. ಆ ನಂತರ ಅಧಿಕಾರಕ್ಕೆ ಬಂದ ಹಲವು ಸರ್ಕಾರಗಳು ಹಿಂದಿನ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಶಕ್ತಿ ಸಾಮರ್ಥ್ಯ ವೃದ್ಧಿಗೆ ಕಾರಣವಾಗಿವೆ, ನಮ್ಮ ಎಲ್ಲ ರಕ್ಷಣಾ ಪಡೆಗಳು ಈಗ ಆಧುನಿಕರಣಕ್ಕೆ ಒಳಗಾಗಿವೆ ಎಂದರು.
ಶತ್ರು ರಾಷ್ಟ್ರಗಳಿಂದ ಯಾವುದೆ ಬೆದರಿಕೆ ಉಂಟಾದಾಗ ನಮ್ಮ ಗಡಿಗಳನ್ನು ರಕ್ಷಿಸಲು ಸೇನಾಪಡೆಗಳು ಸನ್ನದ್ಧವಾಗಿದ್ದು ಈ ಬಗ್ಗೆ ಆತಂಕ ಬೇಡ ಎಂದರು.
ಹುತಾತ್ಮ ಯೋಧರ ಸ್ಮರಣೆಗೆ 50 ವರ್ಷಗಳು ಬೇಕಾಯಿತೇ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆ್ಯಂಟನಿ, `ಹಾಗೇನಿಲ್ಲ, ಯುದ್ಧ ನಡೆದು 50 ವರ್ಷಗಳಾದ ಪ್ರಯುಕ್ತ ಯೋಧರ ಸೇವೆ ಸ್ಮರಣೆಗೆ ಇದು ಸಕಾಲ ಎಂದು ನಾವು ಭಾವಿಸಿದ್ದೇವೆ~ ಎಂದರು.
ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು, ಹಾಗೂ ಭೂ, ವಾಯು ಹಾಗೂ ನೌಕಾ ಪಡೆಗಳ ಮುಖ್ಯಸ್ಥರು ಹಾಜರಿದ್ದು, ಮಡಿದ ಯೋಧರಿಗೆ ನಮನ ಸಲ್ಲಿಸಿದರು.